Feeds:
ಲೇಖನಗಳು
ಟಿಪ್ಪಣಿಗಳು

ಶ್ರೀಮತಿ ಸಿ. ಎನ್.ಮುಕ್ತಾ ಲೇಖಕಿ ಹಾಗೂ ಸುಪ್ರಸಿದ್ಧ ಕಾದಂಬರಿಕಾರರು. ಅವರ ೮೦ ಕಾದಂಬರಿಗಳು ಹಾಗೂ ೧೧ ಕಥಾಸಂಕಲನಗಳು ಈಗಾಗಲೇ ಪ್ರಕಟವಾಗಿವೆ. ಅವರು ತಮ್ಮ ತಾಯಿ ಕಮಲಮ್ಮ ನರಸಿಂಹಮೂರ್ತಿ ಅವರ ನೆನಪಿನಲ್ಲಿ ಪ್ರತೀ ವರ್ಷ ಎರಡು ಪ್ರೌಢಶಾಲೆಗಳಲ್ಲಿ ರಸಪ್ರಶ್ನೆ ಸ್ಪರ್ಧೆ ಏರ್ಪಡಿಸುತ್ತಾರೆ. ಕಳೆದ ಎಂಟು ವರ್ಷಗಳಿಂದ ತಪ್ಪದೆ ಈ ಮಹತ್ಕಾರ್ಯವನ್ನು ನಡೆಸಿಕೊಂಡು ಬರುತ್ತಿದ್ದಾರೆ. ಸರ್ಕಾರೀ, ಖಾಸಗೀ ಪ್ರೌಢಶಾಲೆಯ ಅದರಲ್ಲೂ ಗ್ರಾಮೀಣಭಾಗದ ಮಕ್ಕಳಿಗಾಗಿ ರಸಪ್ರಶ್ನೆ ಸ್ಪರ್ಧೆ ಏರ್ಪಡಿಸುತ್ತಾರೆ. ನಮ್ಮ ನಾಡುನುಡಿ, ಕನ್ನಡದ ಪ್ರಸಿದ್ಧ ಲೇಖಕ ಲೇಖಕಿಯರ ಪರಿಚಯ, ಸಿನೆಮಾ, ರಾಜಕೀಯ, ಸಾಮಾನ್ಯ ಜ್ಞಾನ ಇತ್ಯಾದಿ ಮಿಶ್ರ ವಿಷಯಗಳನ್ನೊಳಗೊಂಡ ಪ್ರಶ್ನೆಗಳನ್ನು ಕೇಳಲಾಗುತ್ತದೆ. ಒಂದು ಪ್ರೌಢಶಾಲೆಯ ೮ರಿಂದ ೧೦ನೇ ತರಗತಿಗಳ ಮಕ್ಕಳಲ್ಲಿ ೪ ತಂಡ ರಚಿಸಿ, ಪ್ರತಿಯೊಂದು ತಂಡದಲ್ಲೂ ನಾಲ್ಕು ಮಕ್ಕಳಂತೆ ಒಟ್ಟು ೧೬ ಮಕ್ಕಳಿಗೆ ಸ್ಪರ್ಧೆಯಲ್ಲಿ ಭಾಗವಹಿಸುವ ಅವಕಾಶ. ನಾಲ್ಕೂ ತಂಡಕ್ಕೂ ಬಹುಮಾನ ಕೊಡುತ್ತಾರೆ. ಶಾಲೆಯ ಬಾಕಿ ಉಳಿದ ಮಕ್ಕಳಿಗೆ ೨೦ ಪ್ರಶ್ನೆಗಳನ್ನು ಕೇಳಿ ಸರಿ ಉತ್ತರಿಸಿದವರಿಗೆ ಅಲ್ಲೇ ಬಹುಮಾನವಾಗಿ ಪೆನ್ನು, ಪುಸ್ತಕ ಕೊಡಲಾಗುತ್ತದೆ.

img_0352
ಇಲ್ಲಿ ಬಹುಮಾನ ಮುಖ್ಯವಲ್ಲ. ಸ್ಪರ್ಧೆಯಲ್ಲಿ ಭಾಗವಹಿಸುವುದು ಮುಖ್ಯ ಎಂದು ಮಕ್ಕಳಿಗೆ ಮನವರಿಕೆ ಮಾಡಲಾಗುತ್ತದೆ. ಮಕ್ಕಳ ಸಾಮಾನ್ಯಜ್ಞಾನವನ್ನು ವೃದ್ಧಿಸುವುದು, ನಮ್ಮ ನಾಡುನುಡಿ ಸಂಸ್ಕೃತಿಯ ಬಗ್ಗೆ ಅರಿವು, ಕನ್ನಡದ ಕಂಪನ್ನು ಪ್ರಸರಿಸುವುದು ಈ ರಸಪ್ರಶ್ನೆ ಸ್ಪರ್ಧೆಯ ಮುಖ್ಯ ಉದ್ದೇಶ ಎಂದು ಮುಕ್ತಾ ಹೇಳುತ್ತಾರೆ.
ವಿಜಯನಗರ ಎರಡನೇ ಹಂತದಲ್ಲಿರುವ ಸಿದ್ಧೇಶ್ವರ ಪ್ರೌಢಶಾಲೆಯಲ್ಲಿ ೩೦-೧೧-೨೦೧೬ರಂದು ಮಧ್ಯಾಹ್ನ ೨.೩೦ಕ್ಕೆ ನಡೆದ ರಸಪ್ರಶ್ನೆ ಸ್ಫರ್ಧೆಯಲ್ಲಿ ೧೬ ಮಂದಿ ಮಕ್ಕಳು ಭಾಗವಹಿಸಿ ಬಹುಮಾನ ಪಡೆದರು. ದಸರಾ ಉದ್ಘಾಟನೆ ಮಾಡಿದವರು ಯಾರೆಂಬ ಸಾಮಾನ್ಯ ಜ್ಞಾನದ ಪ್ರಶ್ನೆಗೆ ಉತ್ತರ ಗೊತ್ತಿರದಿದ್ದರೂ ಸಿನೆಮಾಕ್ಕೆ ಸಂಬಂಧಿಸಿದ ಪ್ರಶ್ನೆಗಳಿಗೆ ಮಕ್ಕಳು ಥಟ್ಟನೆ ಉತ್ತರಿಸಿದ್ದರು. ಸಿನೆಮಾ ಮಾಧ್ಯಮ ಎಷ್ಟು ಪ್ರಭಾವಶಾಲಿ ಮಾಧ್ಯಮವೆಂದು ಇದರಿಂದಲೇ ತಿಳಿಯಬಹುದು. ಸ್ಪರ್ಧೆಯಲ್ಲಿ ಭಾಗವಹಿಸಿದ ಮಕ್ಕಳಿಗೆ ಬಹುಮಾನ ವಿತರಿಸಿ, ಮಕ್ಕಳೆಲ್ಲರಿಗೂ ಚಾಕಲೆಟ್ ಹಂಚಿದರು.

20161130_152918
ಈ ಕಾರ್ಯಕ್ರಮದಲ್ಲಿ ಮೊದಲಿಗೆ ಶಾಲಾ ಶಿಕ್ಷಕರಾದ ಮುರಳೀಧರರು ಪ್ರಾರ್ಥನೆ ಹಾಡಿದರು. ಸಂಗಪ್ಪನವರು ಮುಖ್ಯ ಅತಿಥಿಗಳ ಪರಿಚಯ ಭಾಷಣ ಮಾಡಿದರು. ಸಿ.ಎನ್. ಮುಕ್ತಾ ಸ್ಪರ್ಧೆಯನ್ನು ಉದ್ಘಾಟಿಸಿದರು. ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಶಾಲಾ ಮುಖ್ಯೋಪಾಧ್ಯಾಯರಾದ ಚಂದ್ರಶೇಖರ್ ಹಾಗೂ ಶಾಲಾ ಶಿಕ್ಷಕರೂ ಸಾಹಿತಿಗಳೂ ಆದ ಜಯಪ್ಪ ಹೊನ್ನಾಳಿಯವರನ್ನು ಮುಕ್ತಾ ಸನ್ಮಾನಿಸಿದರು. ರಾಜೇಶ್ವರಿ ಭಾರತಿ ರಸಪ್ರಶ್ನೆ ಸ್ಪರ್ಧೆ ನಡೆಸಿಕೊಟ್ಟರು. ಮತ್ತು ನಿರೂಪಕರಾಗಿ ನಾಗರತ್ನ ಕಾರ್ಯಕ್ರಮವನ್ನು ಚಂದಗಾಣಿಸಿದರು.
೭-೧೨-೨೦೧೬ರಂದು ಮಧ್ಯಾಹ್ನ ೨.೩೦ ಗಂಟೆಗೆ ಕಮಲಮ್ಮ ನರಸಿಂಹಮೂರ್ತಿ ನೆನಪಿನ ರಸಪ್ರಶ್ನೆ ಸ್ಪರ್ಧೆ ನಡೆಯಿತು. ಮಕ್ಕಳು ಉತ್ಸಾಹದಿಂದ ಭಾಗವಹಿಸಿದರು.
ಎರಡೂ ರಸಪ್ರಶ್ನೆ ಕಾರ್ಯಕ್ರಮದಲ್ಲಿ ನಾನೂ ಭಾಗವಹಿಸಿದ್ದೆ. ರೈಲ್ವೇ ವರ್ಕ್ ಶಾಪ್ ಶಾಲೆಯಲ್ಲಿ ಮಕ್ಕಳೊಡನೆ ಎರಡು ಮಾತಾಡುವ ಅವಕಾಶ ನನಗೆ ಲಭಿಸಿತ್ತು. ಮನೆಯಲ್ಲಿ ನಾವು ತಾಯಿಗೆ ನಮ್ಮಿಂದಾದ ಸಹಾಯ ಮಾಡೋಣ. ಯಾರೆಲ್ಲ ಮನೆಯಲ್ಲಿ ನೀವು ತಿಂದ ತಟ್ಟೆ ಲೋಟಗಳನ್ನು ನೀವೇ ತೊಳೆದುಕೊಳ್ಳುತ್ತೀರಿ? ಎಂಬ ಪ್ರಶ್ನೆ ಕೇಳಿದೆ. ಆಗ ಹತ್ತು- ಇಪ್ಪತ್ತು ಮಕ್ಕಳು ಕೈ ಎತ್ತಿದರು. ನೋಡಿ ಖುಷಿ ಆಯಿತು. ಕೈ ಎತ್ತದ ಮಕ್ಕಳಿಗೆ ಇವತ್ತಿನಿಂದ ನಿಮ್ಮ ತಟ್ಟೆ ಲೋಟ ತೊಳೆದುಕೊಳ್ಳುತ್ತೀರಲ್ಲ ಎಂದು ಕೇಳಿದೆ. ತೊಳೆದುಕೊಳ್ಳುತ್ತೇವೆ ಎಂದು ಒಕ್ಕೊರಲಿನಿಂದ ಹೇಳಿದರು. ಶಾಲಾ ಮುಖೋಪಾಧ್ಯಾಯಿನಿ ಪದ್ಮಾಂಬ ಮಾತಾಡುತ್ತ, ‘ ಈ ಕಾರ್ಯಕ್ರಮದಿಂದ ನಾವು ಸ್ಫೂರ್ತಿಗೊಂಡು ತಿಂಗಳಿಗೊಮ್ಮೆಯಾದರೂ ಮಕ್ಕಳಿಗೆ ರಸಪ್ರಶ್ನೆ ಏರ್ಪಡಿಸುತ್ತೇವೆ. ಆಗ ಮಕ್ಕಳ ಸಾಮಾನ್ಯಜ್ಞಾನ ಬೆಳೆಯುತ್ತದೆ’ ಎಂದರು. ಒಟ್ಟು ಎರಡು ಗಂಟೆ ಮಕ್ಕಳೊಂದಿಗೆ  ಕಾಲ ಕಳೆಯುವ ಅವಕಾಶ ಲಭಿಸಿತ್ತು.

20161207_145537

20161207_145626 20161207_145554

20161207_153203

ಹೇಳಿದ್ದು ಸುಳ್ಳಾಗಲಿಲ್ಲ!

ಮೈಸೂರಿನ ಕುವೆಂಪುನಗರದಲ್ಲಿರುವ ಒಂದು ಖಾನಾವಳಿಗೆ ಪಾನೀಪೂರಿ, ದೋಸೆ ತಿನ್ನುವ ಸಲುವಾಗಿ ಒಂದು ಸಂಜೆ ಮಗಳು ಅಳಿಯ ಒಂದು ಸ್ಕೂಟರಿನಲ್ಲಿ ನಾನೊಂದು ಸ್ಕೂಟರಿನಲ್ಲಿ ಹೋದೆವು. ನಾನು ಖಾನಾವಳಿಯ ಪಕ್ಕದಲ್ಲಿ ಕಾಲುದಾರಿಯಲ್ಲಿ ಸ್ಕೂಟರ್ ನಿಲ್ಲಿಸಿದೆ. ಸಾಲಾಗಿ ಆರೇಳು ಬೈಕುಗಳು ಅಲ್ಲಿ ಅದಾಗಲೆ ನಿಂತಿದ್ದುವು. ಮಗಳು ಸ್ಕೂಟರನ್ನು ಸುರಕ್ಷಿತ ಸ್ಥಳದಲ್ಲಿ ನಿಲ್ಲಿಸಿ ಬಂದು, ನೀನೆಲ್ಲಿ ನಿಲ್ಲಿಸಿದೆ ಎಂದು ನನ್ನನ್ನು ಕೇಳಿದಳು. ಸ್ಕೂಟರ್ ನಿಲ್ಲಿಸಿದ ಸ್ಥಳ ತೋರಿಸಿದೆ. ಏ, ಬೇಡ ಅಲ್ಲಿ ನಿಲ್ಲಿಸಬೇಡಾ. ಅಲ್ಲಿ ನಿಲ್ಲಿಸಬಾರದೋ ಏನೋ. ತೆಗೆದು ಬೇರೆಡೆ ನಿಲ್ಲಿಸಿ ಬಾ. ಎಂದಳು. ಏನಾಗಲ್ಲ ಅಲ್ಲಿ ಸುಮಾರು ಗಾಡಿಗಳನ್ನು ನಿಲ್ಲಿಸಿದ್ದಾರೆ. ಅವರೆಲ್ಲ ಮೂರ್ಖರಾ ಎಂದು ವಾದ ಮಾಡಿದೆ. ಅಳಿಯನೂ ಅದಕ್ಕೆ ಅನುಮೋದನೆ ಕೊಟ್ಟ. ನನ್ನ ವಾದಸರಣಿಗೆ ಮಗಳು ಸೋತು ಸುಮ್ಮನಾದಳು. ಪಾನಿಪೂರಿ, ದೋಸೆ ತಿಂದು ಹೊರಗೆ ಬಂದೆವು. ನೋಡಿದಾಗ ಅಲ್ಲಿ ನನ್ನ ಸ್ಕೂಟರ್ ನಾಪತ್ತೆ. ಒಂದು ವಾಹನವೂ ಇಲ್ಲ ಅಲ್ಲಿ! ಮಗಳು ಸ್ಕೂಟರ್ ತಂದು ನಮ್ಮ ಪಕ್ಕ ನಿಲ್ಲಿಸಿದವಳೇ ನಮ್ಮ ಪೆಚ್ಚುಮೋರೆ ನೋಡಿ ಏನಾಯಿತು ಎಂದು ಕೇಳಿದಳು. ಸ್ಕೂಟರ್ ಎತ್ತಾಕಿಕೊಂಡು ಹೋಗಿದ್ದಾರೆ ಎಂದೆ ಸಣ್ಣ ಸ್ವರದಲ್ಲಿ. ನಾನು ಹೇಳಿದ್ದೆ ಅಲ್ಲಿ ನಿಲ್ಲಿಸುವುದು ಬೇಡ ಎಂದು. ಇಬ್ಬರೂ ಸೇರಿ ಇವಳೊಬ್ಬಳು ಎಲ್ಲದಕ್ಕೂ ಹೆದರುತ್ತಾಳೆಂದು ನನ್ನನ್ನೇ ತಮಾಷೆ ಮಾಡಿದಿರಿ. ಹೀಗಾಗುವ ಬದಲು ಮುಂಜಾಗ್ರತೆ ಮಾಡುವುದು ಎಷ್ಟೋ ಒಳ್ಳೆಯದು. ಯಾವುದಕ್ಕೂ ಮುಂಜಾಗ್ರತೆ ಬೇಕು ಎಂದು ಅಜ್ಜಿ ಹೇಳಿದ್ದಾರೆ. ಅಜ್ಜಿ ಹೇಳಿದ್ದು ಸರಿ. ಎಂದು ಸರೀ ಬೈದಳು. ಬೈದದ್ದನ್ನೆಲ್ಲ ತುಟಿಪಿಟಿಕ್ಕೆನ್ನದೆ ಕೇಳಿದೆ. ಅಳಿಯನೂ ಬಾಯಿಬಿಡಲಿಲ್ಲ. ಆಗ ಪ್ರತಿಯಾಗಿ ಮಾತಾಡುವ ಸ್ಥಿತಿಯಲ್ಲಿರಲಿಲ್ಲ ನಾವು!

   ಸ್ಕೂಟರ್ ಅನಂತನ ಹೆಸರಿನಲ್ಲಿತ್ತು. ಹಾಗಾಗಿ ಅನಂತನಿಗೆ ಫೋನಾಯಿಸಿದೆ. ‘ನೀನು ಕೀಲಿ ತಕ್ಕೊಂಡು ಆರಕ್ಷಕ ಠಾಣೆಗೆ ಬಾ. ಅದೇನು ಮೂರು ನಿಮಿಷದ ಕೆಲಸ. ದುಡ್ಡುಕಟ್ಟಿ ತೆಕ್ಕೊಂಡು ಬರುವುದೇ. ಹಿಂದೆ ಎರಡು ಸಲ ನನಗೂ ಈ ಅನುಭವ ಆಗಿತ್ತು’ ಎಂದಾಗ ನನ್ನ ಪುಕು ಪುಕು ತಹಬಂದಿಗೆ ಬಂತು! ಮಗಳು ನನ್ನನ್ನು ಪೋಲೀಸ್ ಠಾಣೆಗೆ ಬಿಟ್ಟಳು. ಅದಾಗಲೇ ಅನಂತ ಕಚೇರಿಯಿಂದ ಅಲ್ಲಿಗೆ ಬಂದಿದ್ದ. ಗಾಡಿ ಸಂಖ್ಯೆ ಹೇಳಿದಾಗ ರೂ. ೩೦೦ ಕಟ್ಟಿದ ಬಳಿಕ ಗಾಡಿ ತಗೊಂಡೋಗಿ ಎಂದರು. ನಾನು ಏನೇನೋ ಕಲ್ಪನೆ ಮಾಡಿದ್ದೆ. ಗಾಡಿ ಯಾರ ಹೆಸರಲ್ಲಿದೆಯೋ ಅವರು ಗುರುತು ಚೀಟಿ ಕೊಂಡೋಗಿ ಪೋಲೀಸರ ಎದುರು ತೋರಿಸಬೇಕು. ಆಗ ಮಾತ್ರ ಗಾಡಿ ಕೊಡುತ್ತಾರೆ ಎಂದೆಲ್ಲ ಕಲ್ಪಿಸಿಕೊಂಡೇ ಅನಂತನಿಗೆ ಹೇಳಿದ್ದು. ಇಲ್ಲಿ ನೋಡಿದಾಗ ಅನಂತ ಬರಬೇಕೆಂದೇ ಇರಲಿಲ್ಲ. ಆದರೆ ಠಾಣೆಯಲ್ಲಿ ಅವರು ಯಾವ ದಾಖಲೆಯನ್ನೂ ಕೇಳಲಿಲ್ಲ. ಗಾಡಿ ಯಾರ ಹೆಸರಲ್ಲಿದೆ ಎಂದೂ ಕೇಳಲಿಲ್ಲ. ಅವರಿಗೆ ರೂ. ೩೦೦ ಮುಖ್ಯವೇ ಹೊರತು ಗಾಡಿಯ ಗೊಡವೆ ಅವರಿಗೆ ಬೇಡ. ಎಂಬುದು ನನಗೆ ವೇದ್ಯವಾಯಿತು. ನಾನು ಯಾವ ಗಾಡಿ ಕೊಂಡೋದೆ ಎಂದು ಅವರು ಅತ್ತ ಕಣ್ಣು ಹಾಯಿಸಲೂ ಇಲ್ಲ. ಹೀಗೂ ಉಂಟೆ? ಎಂದು ನಾನು ಬಾಯಿಬಿಟ್ಟು ಯೋಚಿಸಿದೆ! ದುಡ್ಡು ಅಷ್ಟೇ ಮುಖ್ಯ ಎಂದರಿವಾಯಿತು.

ಪಾನಿಪೂರಿ, ದೋಸೆಯ ಬೆಲೆ ಬಲು ದುಬಾರಿಯೆನಿಸಿ ಹೊಟ್ಟೆಯಲ್ಲಿ ಅವು ಭಗಭಗ ಉರಿಯಲು ತೊಡಗಿತು! ಈ ಘಟನೆಯಿಂದ ತಿಳಿದುಕೊಳ್ಳುವ ನೀತಿಪಾಟವೇನು? ಮಕ್ಕಳು ಹೇಳಿದ್ದು ಕೆಲವೊಮ್ಮೆ ಸುಳ್ಳಾಗುವುದಿಲ್ಲ. ಮಕ್ಕಳ ಮಾತನ್ನು ಒಮ್ಮೊಮ್ಮೆಯಾದರೂ ತಾಳ್ಮೆಯಿಂದ ಕೇಳಬೇಕು. ಅವರು ಹೇಳಿದಂತೆ ನಡೆದುಕೊಳ್ಳಬೇಕು. ಮಕ್ಕಳು ಜಾಣರಿರುತ್ತಾರೆ ಎಂಬುದನ್ನು ಅರ್ಥಮಾಡಿಕೊಳ್ಳಬೇಕು. ಅಮ್ಮಂದಿರು ಕೆಲವೊಮ್ಮೆ ತಾವು ಅತೀಬುದ್ಧಿವಂತರೆಂದು ತಿಳಿದುಕೊಳ್ಳುವುದನ್ನು ಬಿಡಬೇಕು!

ಪ್ರಕಟ: ಅಪರಂಜಿ ಅಕ್ಟೋಬರ ೨೦೧೬

ಹರಿದ್ವಾರ ನಗರ ಪ್ರದಕ್ಷಿಣೆ
ಬೆಳಗ್ಗೆ (೨೩-೯-೨೦೧೬) ಬೇಗ ಏಳುವ ಸಂದರ್ಭ ಇಲ್ಲದೆ ಇದ್ದರೂ ಆರೂವರೆಗೆ ಎಚ್ಚರ ಆಯಿತು. ಎದ್ದು ನಿತ್ಯವಿಧಿ ಪೂರೈಸಿ ನಾನೂ ಹೇಮಮಾಲಾ ಹೊರಗೆ ಹೋದೆವು. ಹೇಮಮಾಲಾ ಅವರು ಚಹಾ ಕುಡಿದರು. ಅಲ್ಲಿ ರಸ್ಕ್ ತೆಗೆದುಕೊಂಡು ಬಂದು ಎಲ್ಲರಿಗೂ ಹಂಚಿದರು. ನಮ್ಮ ಇಬ್ಬರು ಅನ್ನಪೂರ್ಣೆಯರು ಚಿತ್ರಾನ್ನ ಮಾಡಿದ್ದನ್ನು ತಿಂದು ಕೋಣೆಗೆ ಬಂದು ಕುಳಿತು ಹರಟಿ ಕಾಲ ಕಳೆದೆವು.
ಬೆಳಗ್ಗೆ ೧೧ ಗಂಟೆಗೆ ಎರಡು ಆಟೋ ರಿಕ್ಷಾದಲ್ಲಿ ನಗರದಲ್ಲಿರುವ ಪ್ರೇಕ್ಷಣೀಯ ಸ್ಥಳಗಳ ವೀಕ್ಷಣೆಗೆ ಹೊರಟೆವು. ಒಂದು ಆಟೋಗೆ ರೂ. ೧೦೦೦. ಆರೇಳು ಜನ ಕೂರುವಂಥ ಆಟೋರಿಕ್ಷಾವದು. ಬೆಳಗ್ಗೆ ೧೧ಗಂಟೆಯಿಂದ ಸಂಜೆವರೆಗೂ ಎಷ್ಟಾಗುತ್ತೋ ಅಷ್ಟು ಪ್ರೇಕ್ಷಣೀಯ ಸ್ಥಳಗಳನ್ನು ತೋರಿಸಬೇಕೆಂಬ ಒಪ್ಪಂದ ಆಗಿತ್ತು.
ಪಾವನಧಾಮ
ಮೊದಲಿಗೆ ನಾವು ಪಾವನಧಾಮಕ್ಕೆ ಹೋದೆವು. ಈ ದೇವಾಲಯವು ನಗರದಿಂದ ೨ ಕಿ. ಮೀ ದೂರದಲ್ಲಿ ನೆಲೆಗೊಂಡಿದ್ದು, ಸಂಪೂರ್ಣವಾಗಿ ಗಾಜಿನಿಂದಲೇ ನಿರ್ಮಿಸಲಾಗಿದೆ. ಪಾವನಧಾಮ ಒಂದು ಆಧುನಿಕ ದೇವಾಲಯವಾಗಿದ್ದು ಎಲ್ಲಾ ದೇವರ ಅಲಂಕಾರಿಕ ಆಕರ್ಷಕವಾಗಿರುವ ದೊಡ್ಡ ದೊಡ್ಡ ಪ್ರತಿಮೆಗಳು ಗಮನ ಸೆಳೆಯುತ್ತವೆ. ವಿಗ್ರಹಗಳು ಗಾಜಿನಲ್ಲಿ ಎರಡೆರಡಾಗಿ ಕಂಡು ಬಲು ಸುಂದರವಾಗಿ ಕಂಗೊಳಿಸುತ್ತವೆ. ನಾವು ಆ ವಿಗ್ರಹಗಳ ಎದುರು ನಿಂತು ಫೋಟೋ ಕ್ಲಿಕ್ಕಿಸಿಕೊಂಡಾಗ ಗಾಜಿನ ಕಣ್ಣಲ್ಲಿ ನಮ್ಮದೇ ಪ್ರತಿಬಿಂಬವೂ ಬಂದದ್ದು ನೋಡಿ ಖುಷಿಪಟ್ಟೆವು.

20160923_11243020160923_113836

ಭಾರತಮಂದಿರ, ರಾಮಮಂದಿರ
ಅದೇ ರಸ್ತೆಯಲ್ಲಿ ಮುಂದೆ ಸಾಗಿ ಭಾರತಮಂದಿರಕ್ಕೆ ಬಂದೆವು. ಅಲ್ಲಿ ಕೂಡಾ ನಾನಾ ನಮೂನೆಯ ಪ್ರತಿಮೆಗಳು ಮನಸೂರೆಗೊಳ್ಳುತ್ತವೆ. ಮುಂದೆ ರಾಮಮಂದಿರ ನೋಡಿದೆವು.
ವೈಷ್ಣೋದೇವಿಮಂದಿರ
ಹರಿದ್ವಾರದಲ್ಲಿ ಹೊಸದಾಗಿ ನಿರ್ಮಿಸಿದ ದೇವಾಲಯ ವೈಷ್ಣೋದೇವಿ ದೇವಾಲಯ. ಜಮ್ಮುವಿನ ಪ್ರಖ್ಯಾತ ವೈಷ್ಣೋದೇವಿ ದೇವಸ್ಥಾನದ ತದ್ರೂಪವಾಗಿ ಇದನ್ನು ನಿರ್ಮಿಸಿದ್ದಾರೆ. ಜಮ್ಮುವಿನಲ್ಲಿರುವ ವೈಷ್ಣೋದೇವಿ ದೇವಾಲಯಕ್ಕೆ ಹೋಗಲು ಇರುವಂಥ ಸುರಂಗಗಳು ಮತ್ತು ಗುಹೆಗಳು ಇರುವಂತೆ ಇಲ್ಲೂ ಕೂಡ ಸಿಮೆಂಟಿನಿಂದ ಅದನ್ನು ಹೋಲುವಂತೆಯೇ ನಿರ್ಮಿಸಿದ್ದಾರೆ. ನಾವು ದೇವಾಲಯ ನೋಡಿ ನಿರ್ಮಿಸಿದವರ ಕೌಶಲವನ್ನು ಮೆಚ್ಚಿಕೊಂಡೆವು. ಅಲ್ಲಿ ಪ್ರಸಾದರೂಪವಾಗಿ ಸಿಹಿಸಜ್ಜಿಗೆ ಕೊಟ್ಟದ್ದು ಹಸಿದ ಹೊಟ್ಟೆಗೆ ಮೃಷ್ಟಾನ್ನದಂತಾಯಿತು.

20160923_120551
ಭಾರತಮಾತಾ ಮಂದಿರ
ಭಾರತ ಮಾತಾ ಮಂದಿರ ಎಂಟು ಮಹಡಿಗಳನ್ನು ಹೊಂದಿವೆ. ಈ ದೇವಾಲಯವನ್ನು ಮಹಾನ್ ಧಾರ್ಮಿಕ ಗುರು, ಸ್ವಾಮಿ ಸತ್ಯಮಿತ್ರಾನಂದ್ ಗಿರಿಯವರು ನಿರ್ಮಿಸಿದ್ದಂತೆ. ಬಹುಮಹಡಿಗಳುಳ್ಳ ಈ ಸಂಕೀರ್ಣವನ್ನು ಭಾರತಮಾತೆಯ ಗೌರವಾರ್ಥವಾಗಿ ನಿರ್ಮಿಸಿದ್ದಾರೆ. ಇಲ್ಲಿಯ ಪ್ರತಿ ಮಹಡಿಯು ಭಾರತದ ಇತಿಹಾಸದ ಒಂದೊಂದು ಕಾಲದ ಘಟನಾವಳಿಗಳನ್ನು ಚಿತ್ರಿಸುತ್ತದೆ. ರಾಮಾಯಣದ ಕಾಲದಿಂದ ಹಿಡಿದು ಭಾರತದ ಸ್ವಾತಂತ್ರ್ಯ ಸಂಗ್ರಾಮ ಕಾಲದವರೆಗಿನ ಮುಖ್ಯ ಘಟ್ಟಗಳನ್ನು ಇಲ್ಲಿ ಚಿತ್ರಿಸಲಾಗಿದೆ. ಹರಿದ್ವಾರದ ಮುಖ್ಯ ಆಕರ್ಷಣೆಗಳಲ್ಲಿ ಭಾರತ್ ಮಾತಾ ಮಂದಿರವು ಸಹ ಒಂದೆಂದು ಪರಿಗಣಿಸಲಾಗಿದೆ.
ಒಂದೊಂದು ಮಹಡಿಗಳೂ ವಿವಿಧ ಹಿಂದೂ ದೇವತೆಗಳು ಮತ್ತು ಸ್ವಾತಂತ್ರ್ಯ ಹೋರಾಟಗಾರರ ಪ್ರತಿಕೃತಿಗಳಿಗೆ ಮೀಸಲಾಗಿದೆ. ಮೊದಲಿಗೆ ಎತ್ತುಯಂತ್ರದ ಮೂಲಕ ಆರನೇ ಮಹಡಿಗೆ ಹೋಗಬೇಕು. ಏಳನೇ ಮಹಡಿಗೆ ಅಲ್ಲಿಂದ ಮೆಟ್ಟಲು ಹತ್ತಿದಾಗ ಶಿವಮಂದಿರ, ಆರನೇ ಮಹಡಿಯಲ್ಲಿ ವಿಷ್ಣುಮಂದಿರ, ಐದನೆಯದರಲ್ಲಿ ಶಕ್ತಿಮಂದಿರ, ನಾಲ್ಕನೆಯದರಲ್ಲಿ ಪ್ರಾದೇಶಿಕ ಚಿತ್ರಾವಳಿ, ಮೂರನೆಯದರಲ್ಲಿ ಸಂತಮಂದಿರ, ಎರಡನೆಯದರಲ್ಲಿ ಮಾತೃಮಂದಿರ, ಒಂದನೆಯದರಲ್ಲಿ ಶೂರಮಂದಿರ ಇಲ್ಲಿ ಮಹಾತ್ಮ ಗಾಂಧಿ ಸೇರಿದಂತೆ ಭಾರತದ ಸ್ವಾತಂತ್ರ್ಯ ಹೋರಾಟಗಾರರಾದ ವೀರ ಸಾವರ್ಕರ್ ಮತ್ತು ಸುಭಾಷ್ ಚಂದ್ರ ಬೋಸ್ ಮೊದಲಾದವರ ವಿಗ್ರಹಗಳನ್ನು ನೋಡಬಹದು. ನೆಲ ಅಂತಸ್ತಿನಲ್ಲಿ ವಂದೇಭಾರತ ಮಾತರಂ ಭಾರತಮಾತೆಯ ಬೃಹತ್ ವಿಗ್ರಹ ಕಾಣುತ್ತೇವೆ. ಒಂದೊಂದೇ ಮಹಡಿ ನೋಡಿ ಹೊರಬಂದಾಗ ಗಂಟೆ ಒಂದು ಆಗಿತ್ತು. ಭಾರತಮಾತಾ ಮಂದಿರಕ್ಕೆ ರೂ. ೨ ಪ್ರವೇಶ ಶುಲ್ಕವಿದೆ.

?????????????

ಚಂಡೀದೇವಿ ಮಂದಿರ
ಅಲ್ಲಿಂದ ಹೊರಟು ಚಂಡೀದೇವಿಮಂದಿರಕ್ಕೆ ಹೋಗಲು ಕೇಬಲ್ ಕಾರ್ ವ್ಯವಸ್ಥೆ ಇದ್ದ ಕಡೆಗೆ ಬಂದೆವು. ದೇವಸ್ಥಾನಕ್ಕೆ ಮೇಲೆ ಹೋಗಿ ಬರಲು ಕೇಬಲ್ ಕಾರಿಗೆ ತಲಾ ಒಬ್ಬರಿಗೆ ಶುಲ್ಕ ರೂ ೧೬೩. ಕೇಬಲ್ ಕಾರಿನಲ್ಲಿ ಮೇಲೆ ಹೋದೆವು. ಕೇಬಲ್ ಕಾರಿನಲ್ಲಿ ಕೂತಿದ್ದಾಗ ನಮ್ಮ ಮೈಸೂರಿನ ಚಾಮುಂಡಿಬೆಟ್ಟ ನೆನಪಾಯಿತು. ಚಾಮುಂಡಿಬೆಟ್ಟಕ್ಕೆ ಕೇಬಲ್ ಕಾರ್ ವ್ಯವಸ್ಥೆ ಮಾಡಬೇಕೆಂಬ ಸರ್ಕಾರದ ಹಂಬಲವನ್ನು ನಾಗರಿಕರು ತಡೆಯುವಲ್ಲಿ ಯಶಸ್ವಿಯಾದದ್ದು ನೆನಪಿಗೆ ಬಂತು. ಕೇಬಲ್ ಕಾರಿನಲ್ಲಿ ಸುಮಾರು ೬೮೨ ಅಡಿಗಳಷ್ಟು ಮೇಲೆ ಹಾಗೂ ೨೪೩೦ ಅಡಿಗಳಷ್ಟು ಉದ್ದ ಸಾಗುವಾಗ ಹರಿದ್ವಾರದ ಗಂಗೆಯ ಹರಿವನ್ನು ನೋಡುವುದು ಬಹಳ ಸೊಗಸಾಗಿರುತ್ತದೆ.
ಉತ್ತರಾಖಂಡದ ಪ್ರಖ್ಯಾತ ತೀರ್ಥ ಕ್ಷೇತ್ರವಾದ ಹರಿದ್ವಾರದಲ್ಲಿರುವ ಹರ್ ಕಿ ಪೌರಿಯಿಂದ ನಾಲ್ಕು ಕಿ.ಮೀ ಗಳಷ್ಟು ದೂರದಲ್ಲಿ ನೀಲ್ ಪರ್ವತದ ಮೇಲೆ ಚಂಡಿದೇವಿ ದೇವಾಲಯವಿದೆ. ಈ ದೇವಾಲಯವನ್ನು ತಲುಪಲು ಚಂಡಿಘಾಟ್‌ನಿಂದ ಮೂರು ಕಿ.ಮೀ ನಡೆದು, ಮೆಟ್ಟಿಲುಗಳನ್ನು ಹತ್ತಿ ತಲುಪಬಹುದು ಇಲ್ಲವೆ ಇತ್ತೀಚಿಗಷ್ಟೆ ಭಕ್ತರ ಅನುಕೂಲಕ್ಕೆಂದು ಪ್ರಾರಂಭಿಸಲಾದ ಕೇಬಲ್ ಕಾರುಗಳ ಮೂಲಕವೂ ತಲುಪಬಹುದು. ಈ ದೇವಾಲಯವನ್ನು ಕಾಶ್ಮೀರದ ಮಹಾರಾಜರು ಕಟ್ಟಿಸಿದ್ದಂತೆ. ಚಂಡಿದೇವಿಯು ಶುಂಭ ನಿಶುಂಭರೆಂಬ ರಕ್ಕಸರನ್ನು ಇಲ್ಲಿ ಸಂಹರಿಸಿದಳು ಎಂಬುದಾಗಿ ಸ್ಕಂದ ಪುರಾಣದಲ್ಲಿ ಈ ಸ್ಥಳದ ಬಗ್ಗೆ ಉಲ್ಲೇಖವಿದೆ. ಈ ದೇವಾಲಯದ ಮೂಲ ವಿಗ್ರಹವನ್ನು ೮ನೆಯ ಶತಮಾನದಲ್ಲಿ ಆದಿ ಶಂಕರಾಚಾರ್ಯರು ಪ್ರತಿಷ್ಠಾಪಿಸಿದರೆಂದು ನಂಬಲಾಗಿದೆ.

chandi-devi

ಮಧ್ಯಾಹ್ನದ ಭೋಜನ
ಚಂಡಿ ದೇವಾಲಯ ನೋಡಿ ಕೇಬಲ್ ಕಾರಿನಲ್ಲಿ ಕೆಳಗೆ ಬಂದಾಗ ಗಂಟೆ ೨ ಆಗಿತ್ತು. ರಿಕ್ಷಾದಲ್ಲಿ ರಾಮಭವನಕ್ಕೆ ಬಂದೆವು. ಬೆಳಗ್ಗೆಯೇ ಅನ್ನ ಸಾಂಬಾರು ಮಾಡಿಟ್ಟಿದ್ದರು ಅನ್ನಪೂರ್ಣೆಯರು. ಹಸಿದ ಹೊಟ್ಟೆಗೆ ಅದರ ರುಚಿ ಇಮ್ಮಡಿಯಾಗಿ ಊಟದ ಆಟ ಮುಗಿಸಿದೆವು.
ರಾಮಮಂದಿರ, ಹರಿಹರಮಂದಿರ
ಸ್ವಲ್ಪ ವಿಶ್ರಾಂತಿ ಪಡೆದು ಪುನಃ ಅವೇ ಎರಡು ರಿಕ್ಷಾಗಳಲ್ಲಿ ಸಂಜೆ ೩.೪೫ಕ್ಕೆ ಹೊರಟು ರಾಮಮಂದಿರಕ್ಕೆ ಬಂದೆವು. ಅಲ್ಲಿ ರಾಮನ ದೇವಾಲಯ ನೋಡಿದೆವು. ದೇವಾಲಯದ ಆವರಣದಲ್ಲಿ ಸಣ್ಣ ರುದ್ರಾಕ್ಷಿ ಮರವಿದೆ. ಸದ್ಯ ಅದನ್ನು ರಾಮನ ಕಾಲದ್ದೆಂದು ಹೇಳಲಿಲ್ಲ. ಏಕೆಂದರೆ ಮರ ಸಣ್ಣದಾಗಿತ್ತು! ಪಕ್ಕದಲ್ಲೇ ಇದ್ದ ಸರ್ಕಾರಿ ಪೋಷಿತ ರುದ್ರಾಕ್ಷಿ ಅಂಗಡಿಗೆ ಹೋದೆವು. ಅಂಗಡಿಯಾತ ಅದ್ಭುತ ಭಾಷಣಗಾರ. ರುದ್ರಾಕ್ಷಿ ಧರಿಸುವುದರಿಂದ ಆಗುವ ಆರೋಗ್ಯ ಲಾಭಗಳ ಬಗ್ಗೆ ಹೇಳಿದ್ದರಲ್ಲಿ ಒಂದಿಬ್ಬರು ಪ್ರಭಾವಿತಗೊಂಡು ನಾಲ್ಕೈದು ಸಾವಿರ ರೂ. ವ್ಯಾಪಾರ ಮಾಡಿಯೇಬಿಟ್ಟರು. ಸುಮಾರು ಒಂದು ಗಂಟೆ ಕಾಲ ಅವರ ಭಾಷಣ ಕೇಳಿದೆವು. ಅದರಿಂದ ತೊಂದರೆಯೇನೂ ಆಗಲಿಲ್ಲ. ಆ ಸೆಖೆಗೆ ತಂಪಾಗಿ ಅಂಗಡಿಯೊಳಗೆ (ಹವಾನಿಯಂತ್ರಿತ ವಾತಾನುಕೂಲವಿತ್ತು) ನಿಂತು ಭಾಷಣ ಕೇಳಿದೆವು. ಕೂರಲು ಕುರ್ಚಿಗಳಿದ್ದಿದ್ದರೆ ಇನ್ನೂ ಸುಖವಾಗಿ ಅವರ ಮಾತು ಕೇಳಬಹುದಿತ್ತು ಎನಿಸಿದ್ದು ಸುಳ್ಳಲ್ಲ! ಅಲ್ಲಿಂದ ಅನತಿ ದೂರದಲ್ಲೆ ಇದ್ದ ಹರಿಹರಮಂದಿರಕ್ಕೆ ಹೋದೆವು. ಅಲ್ಲಿ ದೊಡ್ಡದಾದ ರುದ್ರಾಕ್ಷಿ ಮರ ಇದೆ. ಅದರಲ್ಲಿ ರುದ್ರಾಕ್ಷಿ ಕಾಯಿಗಳನ್ನು ನೋಡಿದೆವು.

OLYMPUS DIGITAL CAMERA

ದಕ್ಷೇಶ್ವರ ಮಹಾದೇವ ದೇವಾಲಯ
ಹರಿದ್ವಾರದಿಂದ ನಾಲ್ಕು ಕಿ.ಮೀ ದೂರದಲ್ಲಿರುವ ಕಂಖಾಲ್ ಎಂಬಲ್ಲಿರುವ ದಕ್ಷೇಶ್ವರ ದೇವಾಯವು ಶಿವನಿಗೆ ಮುಡಿಪಾದ ದೇವಾಲಯವಾಗಿದೆ. ಹಿಂದೂ ಧರ್ಮವನ್ನು ಸಾರುವ ಹಾಗೂ ಲೋಕ ಪರಿಪಾಲಕರಾಗಿದ್ದ ೧೪ ಜನ ಪ್ರಜಾಪತಿಗಳಲ್ಲಿ ದಕ್ಷ ಮಹಾರಾಜನು ಒಬ್ಬನು. ಇವನ ಪುತ್ರಿಯಾದ ಸತಿಯು ಮಹಾಶಿವನ ಮಡದಿ. ಕಥೆಯ ಪ್ರಕಾರ, ದಕ್ಷ ಪ್ರಜಾಪತಿ ನಡೆಸಿದ ಯಜ್ಞದ ಸಂದರ್ಭದಲ್ಲಿ ಶಿವನಿಗೆ ಆಮಂತ್ರಣವಿರುವುದಿಲ್ಲ. ಆದರೂ ಶಿವನ ಮಡದಿಯಾದ ಸತಿ ಶಿವನ ವಿರೋಧವಿದ್ದರೂ, ತಂದೆ ಕೈಗೊಂಡ ಯಜ್ಞಕ್ಕೆ ಬರುತ್ತಾಳೆ. ಅಲ್ಲಿ ತನ್ನ ಪತಿಗೆ ಮಾಡಿದ ಅವಮಾನವನ್ನು ಸಹಿಸಲಾರದೆ ಸತಿಯು ಕುಂಡಕ್ಕೆ ಹಾರಿ ತನ್ನ ಪ್ರಾಣ ತ್ಯಜಿಸುತ್ತಾಳೆ. ಇದರ ವಿಷಯ ತಿಳಿದ ಶಿವನು ವೀರಭದ್ರನನ್ನು ಸೃಷ್ಟಿಸಿ ಆ ಯಜ್ಞ ಧ್ವಂಸಗೊಳಿಸುತ್ತಾನೆ. ಈ ಸಂದರ್ಭದಲ್ಲಿ ವೀರಭದ್ರನು ದಕ್ಷನ ರುಂಡ ತೆಗೆಯುತ್ತಾನೆ. ಪ್ರಸ್ತುತ ದಕ್ಷನ ರುಂಡ ಬಿದ್ದ ಸ್ಥಳದಲ್ಲಿಯೆ ಇಂದು ಶಿವಲಿಂಗವಿರುವುದನ್ನು ಇಲ್ಲಿ ಕಾಣಬಹುದು. ಅಲ್ಲಿ ಸತಿಕುಂಡ, ದಕ್ಷ ಯಜ್ಞ ಮಾಡಿದ ಕುಂಡಗಳೆಂದು ಎರಡು ಕುಂಡಗಳನ್ನು ಕಾಣುತ್ತೇವೆ. ಅದನ್ನು ನೋಡಿದಾಗ ಪುರಾಣ ಕಥಾನಕ ಎಲ್ಲ ಮನಪಟಲದಲ್ಲಿ ಹಾದು ಹೋಯಿತು. ಆ ಸ್ಥಳಗಳನ್ನೆಲ್ಲ ನೋಡಿದಾಗ ಒಂದೊಂದು ಘಟನೆಗಳೂ ನಿಜವಿದ್ದಿರಬಹುದೇನೋ ಅನಿಸುತ್ತದೆ.
ಹರಿದ್ವಾರದಲ್ಲಿ ಮಾಂಸಾಹಾರ ಮತ್ತು ಮದ್ಯಪಾನಗಳ ಮೇಲೆ ಸಂಪೂರ್ಣ ನಿಷೇಧವಿದೆಯಂತೆ.

OLYMPUS DIGITAL CAMERA

ದಶ ಮಹಾವಿದ್ಯಾ ದೇವಾಲಯ
ದಕ್ಷೇಶ್ವರ ದೇವಾಲಯದ ಆವರಣದಲ್ಲಿಯೆ ಈ ದೇವಾಲಯವೂ ಇದೆ. ಶಕ್ತಿ ಸ್ವರೂಪಿಣಿ ಪಾರ್ವತಿಯ ಹತ್ತು ವಿದ್ಯಾಗುಣಗಳಿಗೆ ಮುಡಿಪಾದ ದೇವಾಲಯ ಇದಾಗಿದೆ. ಹಿಂದೂ ಸ್ತ್ರೀಯರಿಂದ ಹೆಚ್ಚಾಗಿ ಭೇಟಿ ನೀಡಲ್ಪಡುವ ಈ ದೇವಸ್ಥಾನದಲ್ಲಿ ನವರಾತ್ರಿ ಉತ್ಸವವನ್ನು ಅದ್ದೂರಿಯಿಂದ ಆಚರಿಸಲಾಗುತ್ತದೆಯಂತೆ. ಆ ಹತ್ತು ಗುಣಗಳ ಅವತಾರಗಳಾಗಿ ಪಾರ್ವತಿ ದೇವಿಯನ್ನು ಕಾಳಿ, ತಾರಾ, ಷೋಡಶಿ, ಭುವನೇಶ್ವರಿ, ಭೈರವಿ, ಚಿನ್ನಮಸ್ತಾ, ಧೂಮವತಿ, ಬಾಗಲಮುಖಿ, ಮಾತಂಗಿ ಹಾಗೂ ಕಮಲಗಳೆಂದು ಪೂಜಿಸಲಾಗುತ್ತದೆ.
ಅಲ್ಲಿಗೆ ನಮ್ಮ ಹರಿದ್ವಾರ ಪ್ರದಕ್ಷಿಣೆ ಹಾಕಿಸುವ ರಿಕ್ಷಾದವನ ಜವಾಬ್ದಾರಿ ಮುಗಿಯಿತು. ಅಲ್ಲಿಂದ ಸಂಜೆ ಆರಕ್ಕೆ ಹೊರಟು ಗಂಗಾರತಿ ನೋಡಲು ಹರ್ ಕಿ ಪೌರಿ ಕಡೆ ನಮ್ಮನ್ನು ಇಳಿಸಿದರು.
ಗಂಗಾರತಿ
ಹರಿದ್ವಾರದಲ್ಲಿರುವ ಹರ್ ಕಿ ಪೌರಿ ಘಾಟ್ (ಸ್ನಾನ ಮಾಡುವ ಸ್ಥಳ) ಪ್ರದೇಶವಾಗಿದ್ದು ಒಂದನೆಯ ಶತಮಾನದಲ್ಲಿ ವಿಕ್ರಮಾದಿತ್ಯ ರಾಜನಿಂದ ನಿರ್ಮಿಸಲ್ಪಟ್ಟಿದೆಯಂತೆ. ಈ ಸ್ಥಳದಲ್ಲಿರುವ ಬ್ರಹ್ಮಕುಂಡವು ಹೆಚ್ಚಿನ ಪಾವಿತ್ರ್ಯತೆ ಪಡೆದಿದ್ದು ಶಿವನ ಹೆಜ್ಜೆ ಗುರುತಿನ ಸ್ಥಳವೆಂದು ಪ್ರತೀತಿಯಲ್ಲಿದೆ. ಇಲ್ಲಿ ಸಂಜೆಯ ಸಮಯದಲ್ಲಿ ಗಂಗೆಗೆ ಆರತಿ ಮಾಡಲಾಗುತ್ತದೆ. ಅದನ್ನು ನೋಡಲು ಸಾವಿರಾರು ಭಕ್ತರು ಸೇರುತ್ತಾರೆ. ಹಾಗೂ ತಮ್ಮ ಪೂರ್ವಜರ ನೆನಪಿನಲ್ಲಿ ಅವರ ಆತ್ಮಕ್ಕೆ ಶಾಂತಿ ಕೋರುತ್ತ ದೀಪಗಳನ್ನು ತೇಲಿ ಬಿಡುತ್ತಾರೆ. ಅದನ್ನು ನೋಡುವ ಸಲುವಾಗಿ ನಾವು ಅಲ್ಲಿಗೆ ಹೋದೆವು. ಅದಾಗಲೇ ಅಲ್ಲಿ ಸಾವಿರಾರು ಮಂದಿ ನದಿ ದಡದಲ್ಲಿ ಕೂತಿದ್ದರು. ಗಂಗಾರತಿ ಹತ್ತಿರದಿಂದ ನೋಡುವುದು ಬಲು ಸುಂದರ ದೃಶ್ಯವಂತೆ. ನಮಗೆ ಗಂಗಾರತಿ ನೋಡಲು ಹತ್ತಿರದಲ್ಲಿ ಸ್ಥಳ ಸಿಗಲಿಲ್ಲ. ದೂರದಲ್ಲಿ ಕುಳಿತು ನೋಡಿದೆವು. ಆದರೆ ನಮಗೆ ಅಂಥ ಸುಂದರ ದೃಶ್ಯ ನೋಡಲು ಸಿಗಲಿಲ್ಲ. ಗಂಗಾರತಿ ಸಮಯದಲ್ಲಿ ಹಾಡುವ ಹಾಡು ಕೇಳಲು ಬಹಳ ಚೆನ್ನಾಗಿರುತ್ತದೆ. ಸಂಜೆ ಹೊತ್ತಲ್ಲಿ ನದಿ ದಂಡೆಯಲ್ಲಿ ಕೂತು ಕೆಲವು ಆರತಿ ತೇಲುತ್ತ ಬರುವುದನ್ನು ನೋಡುವುದೇ ಸುಂದರ ಅನುಭವ. ಗಂಗಾರತಿ ನೋಡಿ ಸಂಜೆ ಏಳೂವರೆಗೆ ನಾವು ನಮ್ಮ ವಸತಿಗೃಹಕ್ಕೆ ಹಿಂದಿರುಗಿದೆವು.
ರಾತ್ರಿಯ ಭರ್ಜರಿ ಭೋಜನ
ಒಂದು ದಿನವೂ ಪಾಯಸ ಮಾಡಲಿಲ್ಲವೆಂದು ಸಿಹಿಪ್ರಿಯಳಾದ ಗೋಪಕ್ಕ ಆಕ್ಷೇಪಣೆ ಸಲ್ಲಿಸಿದ್ದರು. ಅವರಿಗೇಕೆ ಬೇಜಾರು ಮಾಡುವುದೆಂದು ಶಶಿಕಲಕ್ಕ ಹಾಗೂ ಸರಸ್ವತಕ್ಕನವರು ಆ ರಾತ್ರಿ ಹೆಸರುಬೇಳೆ ಪಾಯಸ ಮಾಡಿದ್ದರು. ಕರಿದತಿಂಡಿ ಪ್ರಿಯರಿಗಾಗಿ ಗಂಗಾರತಿ ನೋಡಿ ಬಂದವರೇ ಶಶಿಕಲಾಕ್ಕ ಈರುಳ್ಳಿ ಪಕೋಡ ಕರಿದೇಬಿಟ್ಟರು. ರಾತ್ರಿ ೮.೩೦ಗೆ ಸುರುಮಾಡಿ ಅರ್ಧ ಗಂಟೆಯೊಳಗೆ ಪಕೋಡ ಕರಿದು ತೆಗೆದು ಪೇರಿಸಿದರು. ಅಬ್ಬ ಅವರ ಪರಿಶ್ರಮವೇ ಎನಿಸಿತು. ಈರುಳ್ಳಿ ಪಕೋಡದ ಪರಿಮಳ ನಮ್ಮ ಕೋಣೆಯ ಸುತ್ತ ಆವರಿಸಿದಾಗ ಅದರಿಂದ ಪ್ರಭಾವಿತಗೊಂಡವರೆಲ್ಲ ಅಡುಗೆ ಕೋಣೆಗೆ ಧಾವಿಸಿ ಬಂದು ಹೇಗಿದೆ ಎಂದು ರುಚಿ ನೋಡಿ ಹೇಳಬೇಕಾ ಎಂದು ಕೇಳಿ ಅಲ್ಲೆ ಎಡತಾಕಿದೆವು! ‘ಎಲ್ಲ ಸರಿಯಾಗಿದೆ. ಯಾರೂ ರುಚಿ ನೋಡಿ ಹೇಳುವುದು ಬೇಡ. ಊಟ ತಯಾರಾದಾಗ ನಿಮ್ಮನ್ನು ಕರೆಯುತ್ತೇವೆ ಹೋಗಿ’ ಎಂದು ನಮ್ಮನ್ನು ಅಲ್ಲಿಂದ ಓಡಿಸಿದರು! ಎರಡೆರಡು ಪಕೋಡ, ಅರ್ಧ ಗ್ಲಾಸು ಪಾಯಸ, ಅನ್ನ ಸಾರು ಭರ್ಜರಿ ಭೋಜನವನ್ನೇ ಮಾಡಿ ಹಾಕಿದ್ದರು ಅನ್ನಪೂರ್ಣೆಯರು. ನನ್ನ ಪಾಲಿನ ಪಾಯಸ ಗೋಪಕ್ಕನಿಗೆ ಮೀಸಲಾಗಿಟ್ಟು, ಅದರ ಬದಲಾಗಿ ಅವರ ಪಾಲಿನ ಪಕೋಡ ಕೊಟ್ಟದ್ದನ್ನು ಪಡೆದು ತಿಂದು ತೃಪ್ತಿ ಹೊಂದಿದೆ!

ಗಂಗಾಸ್ನಾನಂ ತುಂಗಾಪಾನಂ
ಬೆಳಗ್ಗೆ (೨೪-೯-೨೦೧೬)ಆರು ಗಂಟೆಗೆ ಗಂಗಾಸ್ನಾನಕ್ಕೆ ಹೆಚ್ಚಿನವರೂ ಹೋದರು. ಅಲ್ಲಿ ಗಂಡಸರು ಅವರ ಹಿರಿಯರಿಗೆ ತರ್ಪಣ ಕೊಟ್ಟರಂತೆ. ನಾವು ಕೆಲವೇ ಮಂದಿ ಹೋಗಲಿಲ್ಲ. ನಾನು, ಹೇಮಮಾಲಾ, ಸವಿತಾ ೭ ಗಂಟೆಗೆ ಹೊರಗೆ ಹೋಗಿ ಕಾಫಿ ಕುಡಿದು, ಮುಂದಿನ ರಸ್ತೆಯಲ್ಲಿ ಅಡ್ಡಾಡಿ ಒಂದು ಹೊಟೇಲಿಗೆ ಹೋಗಿ ಪರೋಟ ತಿಂದು ಬಂದೆವು. ಗಂಗಾಸ್ನಾನಕ್ಕೆ ಹೋದವರು ೯ ಗಂಟೆಗೆ ಹಿಂತಿರುಗಿ ಬಂದು ಸರಸರನೆ ಉಪ್ಪಿಟ್ಟು ತಯಾರಿಸಿ ನಮ್ಮನ್ನು ತಿಂಡಿಗೆ ಕರೆದಾಗ ನಾವು ಬಡಿಸುತ್ತೇವೆ ಎಂದರೂ ಬಿಡದೆ ತಟ್ಟೆಗೆ ಉಪ್ಪಿಟ್ಟು ಹಾಕಿ ಕೊಟ್ಟಾಗ ನಮಗೆ ನಿಜಕ್ಕೂ ನಾಚಿಕೆ, ಸಂಕೋಚ ಆಗಿತ್ತು. ಅವರ ಈ ಪ್ರೀತಿಗೆ ಮನಸೋತು ಉಪ್ಪಿಟ್ಟು ತಿಂದೆವು. ಬಲು ರುಚಿಯಾಗಿತ್ತು.
ಮಾನಸದೇವಿಮಂದಿರ
ಮಾನಸದೇವಿ ಮಂದಿರಕ್ಕೆ ಹೋಗಲು ನಾವು ಎಂಟು ಮಂದಿ ರಿಕ್ಷಾದಲ್ಲಿ ಹೋದೆವು. ಕೆಲವರೆಲ್ಲ ಹಿಂದೆಯೇ ಅದನ್ನು ನೋಡಿದ್ದರೆಂದು ಬರದೆ ಕೋಣೆಯಲ್ಲೇ ಕೂತಿದ್ದರು. ಹೋಗುವ ದಾರಿಯಲ್ಲಿ ಹಣ್ಣುಕಾಯಿ ತೆಗೆದುಕೊಳ್ಳಿ ಎಂದು ಅದನ್ನು ಮಾರುವ ಮಂದಿ ಪೀಡಿಸುತ್ತಾರೆ. ಪುಟಾಣಿ ಬಾಲಕಿ ನನ್ನ ಹಿಂದೆಯೇ ಬಂದು ಕೇಳಿಕೋಂಡಾಗ ತೆಗೆದುಕೊಳ್ಳದೆ ಇರಲು ಸಾಧ್ಯವಾಗಲಿಲ್ಲ. ಕೇವಲ ರೂ. ಹತ್ತು ಕೊಡಿ ಸಾಕು ಎಂದು ಒಂದು ತೆಂಗಿನಕಾಯಿ, ೨ ಬಳೆ ಇರುವ ತೊಟ್ಟೆಯನ್ನು ಕೊಟ್ಟಳು. ಕೈಬೀಸಣಿಗೆ ನನ್ನನ್ನು ಆಕರ್ಷಿಸಿತು. ಅದನ್ನು ಮಡಚಿದರೆ ಸಣ್ಣದಾಗುತ್ತದೆ. ಅದಕ್ಕೆ ಒಂದಕ್ಕೆ ರೂ. ಹತ್ತು ಮಾತ್ರ. ಅದನ್ನು ತೆಗೆದುಕೊಂಡೆ. (ಈಗ ನಾನು ಉಷ್ಣ‌ಅಲೆಗಳ ಏರಿಳಿತದಿಂದ ಆಗಾಗ ಸೆಖೆ ಅನುಭವಿಸುತ್ತ ಇದ್ದೇನೆ. ಅದಕ್ಕೆ ಈ ಬೀಸಣಿಗೆ ಅನುಕೂಲಕರವಾಗಿದೆ!)
ಮಾನಸದೇವಿ ಮಂದಿರಕ್ಕೆ ನಾವು ಕೇಬಲ್ ಕಾರಿನಲ್ಲಿ ಹೋದೆವು. ಹೋಗಿ ಬರಲು ಟಿಕೆಟ್ ದರ ರೂ.೯೫. ತುಂಬ ಮಂದಿ ಕೇಬಲ್ ಕಾರಿಗೆ ಕಾದಿದ್ದರು. ನಾವು ನಮ್ಮ ಸರದಿ ಬರಲು ಒಂದು ಗಂಟೆ ಕಾಯಬೇಕಾಯಿತು.

ಕೃಪೆ : ಅಂತರ್ಜಾಲ

ಕೃಪೆ : ಅಂತರ್ಜಾಲ

ಹರಿದ್ವಾರದ ಮೂರು ಸಿದ್ಧಪೀಠಗಳ ಪೈಕಿ ಮಾನಸಾ ದೇವಿ ದೇವಾಲಯವೂ ಒಂದು. ಶಕ್ತಿಯ ಅವತಾರವೆನ್ನಲಾಗುವ ಮಾನಸಾ ದೇವಿಯನ್ನು ಇಲ್ಲಿ ಆರಾಧಿಸಲಾಗುತ್ತದೆ. ಶಿವನ ಮನಸ್ಸಿನಿಂದ ರೂಪಗೊಂಡ ಶಕ್ತಿದೇವಿ ಇವಳಾಗಿರುವುದರಿಂದ ಇವಳಿಗೆ ಮಾನಸಾ ದೇವಿ ಎಂಬ ಹೆಸರು ಬಂದಿದೆಯಂತೆ. ಮಾನಸಾದೇವಿ ಮಂದಿರವು ಬಿಲ್ವ ಪರ್ವತದ ಮೇಲಿದೆ. ಪರ್ವತದ ಮೇಲಿನಿಂದ ಹರಿದ್ವಾರ ನಗರ ಸುಂದರವಾಗಿ ಕಾಣುತ್ತದೆ.
ಈ ದೇವಾಲಯಕ್ಕೆ ಹೋಗಲು ಕೇಬಲ್ ಕಾರ್ ಹಾಗೂ ನಡೆದುಕೊಂಡೂ ಹೋಗಲು ರಸ್ತೆ, ಮೆಟ್ಟಲುಗಳಿವೆ. ಮಾನಸಾದೇವಿ ಮಂದಿರದಲ್ಲಿ ದೇವಿಯ ಎರಡು ಮೂರ್ತಿಗಳಿದ್ದು ಒಂದರಲ್ಲಿ ಮೂರು ಮುಖಗಳು ಮತ್ತು ಐದು ಬಾಹುಗಳಿವೆ. ಇನ್ನೊಂದರಲ್ಲಿ ೮ ಬಾಹುಗಳಿವೆ. ಮಾನಸಾ ದೇವಿಯ ಆಲಯವಿರುವ ಬಿಲ್ವ ಪರ್ವತವು ಹರಿದ್ವಾರ ನಗರದ ಮಧ್ಯಭಾಗದಲ್ಲಿಯೇ ಇದ್ದು ಹರ್‌ಕಿಪೌಡಿಯಿಂದ ಎತ್ತರದ ಪರ್ವತದಲ್ಲಿ ಕಾಣುತ್ತದೆ.
ಮಧ್ಯಾಹ್ನದ ಭೂರೀಬೋಜನ
ದೇವಾಲಯ ಸುತ್ತಿ ಬಂದು ರಿಕ್ಷಾದಲ್ಲಿ ರಾಮಭವನಕ್ಕೆ ಬಂದೆವು. ಹೀರೆಕಾಯಿ ಬಜ್ಜಿ, ಆಲೂಗಡ್ಡೆ ಬಜ್ಜಿ, ರವೆ ಪಾಯಸ, ಅನ್ನ, ಸಾಂಬಾರು, ಮಜ್ಜಿಗೆ ಊಟಕ್ಕೆ ಇಷ್ಟು ಬಗೆ ತಯಾರಾಗಿತ್ತು. ಮಧ್ಯಾಹ್ನದ ಭೂರಿ ಭೋಜನ ಎಂದೇ ಹೇಳಬಹುದು. ತರ್ಪಣ ಕೊಟ್ಟ ಕಾರಣ ಪಾಯಸ ಇಲ್ಲದಿದ್ದರೆ ಹೇಗೆ ಎಂದು ಪಾಯಸ ಮಾಡಿದರಂತೆ. ಹೀರೆಕಾಯಿ ಬಜ್ಜಿ ಬಹಳ ಚೆನ್ನಾಗಿರುತ್ತದೆ ಎಂದು ವಿಠಲರಾಜು ಹೇಳಿದ್ದಕ್ಕೆ ಅದನ್ನೂ ಮಾಡಿ ಬಡಿಸಿದರು. ಸರಸ್ವತಕ್ಕ, ಶಶಿಕಲಾಕ್ಕ ಮತ್ತು ಅವರಿಗೆ ಸಹಾಯ ಮಾಡಿದ ಎಲ್ಲರನ್ನೂ ನಾವು ಕೃತಜ್ಞತೆಯಿಂದ ಸ್ಮರಿಸಬೇಕು. ಅಡುಗೆ ಮಾಡಿ ಎಂದು ಅವರನ್ನು ಯಾರೂ ಒತ್ತಾಯಿಸಿರಲಿಲ್ಲ. ಅವರೇ ಬಲು ಪ್ರೀತಿಯಿಂದ ಮಾಡಿ ಬಡಿಸಿದ್ದರು. ಭರ್ಜರಿ ಊಟ ಮಾಡಿ ಕೋಣೆಯಲ್ಲಿ ಕಾಲುಚಾಚಿ ಮಲಗಿದೆವು.

2016-10-02_15-32-01 2016-10-02_16-01-01

20160923_204821

ಈ ಸಮಯ ವ್ಯಾಪಾರಮಯ!
ನಮ್ಮ ವಾಸ್ತವ್ಯ ಹರಿದ್ವಾರದಲ್ಲಿ ಕೊನೆಯದಿನವಾದ ಆ ಸಂಜೆ ಆರು ಗಂಟೆಗೆ ಪೇಟೆ ಬೀದಿಯಲ್ಲಿ ಸುತ್ತು ಹೊಡೆದೆವು. ಬಟ್ಟೆಬರೆ, ಸ್ವೆಟರ್, ಬಳೆ, ಚೀಲ, ತಿಂಡಿತಿನಿಸುಗಳು, ದೊಡ್ಡ ಬಾಣಲೆಯಲ್ಲಿ ಕಾಯಿಸುತ್ತಿರುವ ಎಮ್ಮೆಯ ಹಾಲು ಎಲ್ಲವನ್ನೂ ನೋಡುತ್ತ ಸಾಗಿದೆವು. ಕೆಲವರು ಹಾಲು ಕುಡಿದರು. ನನ್ನ ತಂಗಿ ಸವಿತಾ ಹಾಲು ಕುಡಿದು ‘ತವರು ಮನೆಯಲ್ಲಿ ಕುಡಿದ ಹಾಲಿನಂತೆಯೇ ತುಂಬ ರುಚಿ ಇದೆ’ ಎಂದಳು. ಕಚೋರಿ, ಸಮೋಸಗಳಿಗೆ ಒಂದಕ್ಕೆ ರೂ. ಹತ್ತು ಮಾತ್ರ. ಅದನ್ನು ರುಚಿ ನೋಡಿದೆವು. ಒಂದೊಂದು ಅಂಗಡಿಯೊಳಗೂ ಕಾಲು ಗಂಟೆ ನಿಂತು ನೋಡಿ ಮುಂದೆ ಹೋಗುತ್ತಿದ್ದೆವು. ನಾನು ದೊಡ್ಡಮಟ್ಟದ ಯಾವ ವಸ್ತುಗಳನ್ನೂ ತೆಗೆದುಕೊಳ್ಳದೆ ಇರಲು ತೀರ್ಮಾನಿಸಿದೆ. ಸಣ್ಣಪುಟ್ಟದ್ದು ಬಳೆ, ಚಪ್ಪಲಿ, ಇತ್ಯಾದಿ ತೆಗೆದುಕೊಂಡೆ ಅಷ್ಟೆ. ನಮ್ಮಲ್ಲಿ ಅನೇಕರು ರಗ್ಗು, ಸ್ವೆಟರು, ಬ್ಯಾಗ್ ಇತ್ಯಾದಿ ವಸ್ತುಗಳನ್ನು ಕೊಂಡುಕೊಂಡರು.

20160924_175734
ಕಲಿತ ಪಾಟ!
ರಸ್ತೆ ಬದಿ ಚೂಡಿದಾರ ಮಾರಾಟ ಮಾಡುತ್ತಿದ್ದನೊಬ್ಬ. ಕೇವಲ ರೂ.೧೦೦ ಎಂದು ಹೇಳಿದ್ದು ಕೇಳಿ ಕಿವಿ ನೆಟ್ಟಗಾಯಿತು. ಏನು ತೆಗೆದುಕೊಳ್ಳದೆ ಇರಲು ತೀರ್ಮಾನಿಸಿ ಹಾಕಿದ ಗಂಟು ಸ್ವಲ್ಪ ಸಡಿಲವಾಗಿ ಚೂಡಿದಾರದ ಮುಂದೆ ನಿಂತೆ. ಹತ್ತಿಬಟ್ಟೆಯ ಚೂಡಿದಾರವೊಂದು ಬಹಳ ಆಕರ್ಷಕವಾಗಿ ನನ್ನ ಕಣ್ಣಿಗೆ ಕಂಡಿತು. ಮುಟ್ಟಿ ನೋಡಿದೆ. ಆಹಾ ಶುದ್ಧ ಹತ್ತಿಯದೇ ಎಂದು ಕಾತರಿ ಆಯಿತು. ಕೇವಲ ರೂ. ೧೦೦ ತಾನೆ ಎಂದು ತೆಗೆದುಕೊಂಡೇ ಬಿಟ್ಟೆ. ಟಾಪ್‌ನ ಮಡಿಕೆಬಿಚ್ಚಿ ತೋರಿಸಿದ. ಸರಿ ಇದೆ ಎಂದು ಖಾತ್ರಿ ಆಯಿತು. ಹಾಗೆಯೇ ನಮ್ಮವರು ಮೂರು ನಾಲ್ಕು ಜನ ವ್ಯಾಪಾರ ಮಾಡಿದರು. ವ್ಯಾಪಾರ ಮಾಡಿ ಬೀಗಿದೆವು.
ಅಂಗಡಿ ಅಂಗಡಿ ಸುತ್ತಿ ಕಂಡದ್ದನ್ನೆಲ್ಲ ಕಣ್ಣುತುಂಬ ನೋಡಿ ತೃಪ್ತಿಪಟ್ಟು ರಾತ್ರಿ ಏಳೂವರೆಗೆ ಕೋಣೆಗೆ ಬಂದೆವು. ಕೋಣೆಗೆ ಬಂದು ಚೂಡಿದಾರ ತೆಗೆದುಕೊಂಡವರು ಬಿಚ್ಚಿ ನೋಡಿದರು. ನೋಡಿದರೆ ಪ್ಯಾಂಟ್‌ನ ಉದ್ದ ಅರ್ಧವೇ ಇದ್ದು, ಅಗಲ ಆನೆಯನ್ನೂ ತೂರಿಸುವಷ್ಟು ಇತ್ತು! ಮೋಸ ಹೋದ ಅರಿವಾಗಿ ಅದನ್ನು ಆ ಅಂಗಡಿಯವನಿಗೆ ವಾಪಾಸು ಮಾಡಲು ಅವರೆಲ್ಲ ಓಡಿದರು. ಪರಿಪರಿಯ ಮಾತಿನ ಕೌಶಲದಲ್ಲಿ ಅವನಿಗೆ ವಾಪಾಸು ಕೊಟ್ಟು ರೂ ೧೦೦ ಹಿಂದಕ್ಕೆ ಪಡೆಯುವಲ್ಲಿ ಯಶಸ್ವಿಯಾದರು. ನಾನು ವಾಪಾಸು ಮಾಡಲಿಲ್ಲ. ಕಸದಿಂದ ರಸ ಮಾಡೊಣವೆಂದು ಇಟ್ಟುಕೊಂಡೆ. ಮನೆಗೆ ಬಂದು ಅದರಿಂದ ನಾಲ್ಕು ದಿಂಬಿನ ಕವರು ಹೊಲಿದೆ! ಹಾಗಾಗಿ ರೂ. ನೂರು ದಂಡವಾಗಲಿಲ್ಲ ಎಂದು ಸಮಾಧಾನಪಟ್ಟುಕೊಂಡೆ! ಮಾರಾಟ ಮಾಡುವವನೂ ಬುದ್ಧಿವಂತನೇ ಅವನಿಗೆ ವ್ಯಾಪಾರ ಮಾಡುವ ಕಲೆ ಇದೆ! ಅವನು ಟಾಪ್‌ನ ಮಡಿಕೆ ಬಿಚ್ಚಿ ತೋರಿಸುತ್ತಾನೆ ಹೊರತು ಪ್ಯಾಂಟ್ ಮಡಿಕೆ ಬಿಚ್ಚುವುದೇ ಇಲ್ಲ!

2016-10-23_13-56-50

ಒಂದು ವಸ್ತು ಕಡಿಮೆಬೆಲೆಗೆ ಸಿಗುತ್ತದೆ ಎಂದಾಗ ಮನುಜ ತನಗೆ ಅವಶ್ಯವಿಲ್ಲದಿದ್ದರೂ ಅದರತ್ತ ಆಕರ್ಷಣೆ ಹೊಂದಿ ಅದನ್ನು ಖರೀದಿಸುತ್ತಾನೆ. ನಿಜಕ್ಕೂ ನನಗೆ ಚೂಡಿದಾರದ ಅವಶ್ಯಕತೆ ಖಂಡಿತಾ ಇರಲಿಲ್ಲ. ಬೀರು ತುಂಬ ಅಂಗಿಗಳಿದ್ದುದು ತಿಳಿದಿತ್ತು. ಕಡಿಮೆ ಕ್ರಯದ ಬಟ್ಟೆ ಬಾಳಿಕೆ ಬರುವುದಿಲ್ಲ ಎಂಬುದೂ ತಿಳಿಯದವಳೇನೂ ಅಲ್ಲ. ಆಗ ಬುದ್ಧಿಗೆ ಮಂಕು ಕವಿದು ಅವಶ್ಯವಿಲ್ಲದಿದ್ದರೂ ಕೊಂಡುಕೊಂಡೆ. ಅದಕ್ಕೆ ನಾವು ಖರೀದಿಸುವ ಮೊದಲು ಆದಷ್ಟು ಬುದ್ಧಿ ಉಪಯೋಗಿಸಬೇಕು. ವ್ಯಾಪಾರ ಮಾಡುವ ಮುನ್ನ ಅದು ನಮಗೆ ಅವಶ್ಯವೇ ಎಂಬುದನ್ನು ನಾಲ್ಕಾರು ಬಾರಿ ಯೋಚಿಸಿಯೇ ಕೊಂಡುಕೊಳ್ಳಬೇಕು ಎಂದು ಆಗ ಪಾಟ ಕಲಿತೆ. ಬೇರೆಯವರಿಗೆ ಈ ಪಾಟ ಮಾಡುವುದರಲ್ಲಿ ನಾನು ನುರಿತವಳೇ!
ರಾತ್ರಿ ಅನ್ನ, ಸಾಂಬಾರು, ಹಪ್ಪಳ, ಪೊಂಗಲ್, ಗೊಜ್ಜು ಊಟ ಮಾಡಿದೆವು.

ಪತಂಜಲಿ ಯೋಗ ಶಿಕ್ಷಣ ಸಂಸ್ಥೆಯ ರಾಮಸ್ವಾಮಿ ಅವರು ಬ್ರಹ್ಮಚಾರಿಗಳು. ಯೋಗಸಾಧಕರು.  ಯಾವ ಪ್ರತಿಫಲಾಪೇಕ್ಷೆ ಇಲ್ಲದೆ ನಾಡಿನಾದ್ಯಂತ ಯೋಗಪ್ರಚಾರಕರಾಗಿ ಸಂಚರಿಸುತ್ತಾರೆ. ಹರಿದ್ವಾರದಲ್ಲಿ ರಾತ್ರೆ ವಿಠಲರಾಜು ಅವರನ್ನು ನೋಡಲು ಬಂದರು. ನಾವೆಲ್ಲ ಅವರನ್ನು ಭೇಟಿಯಾಗಿ ಪರಸ್ಪರ ಪರಿಚಯ ಮಾಡಿಕೊಂಡೆವು. ಕೆಲವರು ಕಾಲುಮುಟ್ಟಿ ನಮಸ್ಕರಿಸಲು ಮುಂದಾದಾಗ ಬೇಡ, ಕಾಲುಮುಟ್ಟಬೇಡಿ. ಕಾಲುಮುಟ್ಟಿ ನಮಸ್ಕರಿಸಬೇಕಾದದ್ದು ತಂದೆತಾಯಿಗೆ ಮಾತ್ರ. ಬೇರೆ ಯಾರಿಗೂ ಕಾಲು ಮುಟ್ಟಿ ನಮಸ್ಕರಿಸಲು ಹೋಗಬೇಡಿ ಹಾಗೆಯೇ ನಮಸ್ಕಾರ ಮಾಡಿ ಎಂದರು.

20160924_222310

ನಮ್ಮ ನಮ್ಮ ಲಗೇಜನ್ನು ಸರಿಯಾಗಿ ಬ್ಯಾಗಿಗೆ  ತುಂಬಿಸಿ ನಾಳೆ ಬೆಳಗ್ಗೆಗೆ ಹೊರಡಲು ತಯಾರಾಗಿ ಮಲಗಿದೆವು.
ಹರಿದ್ವಾರಕ್ಕೆ ವಿದಾಯ
ಬೆಳಗ್ಗೆ (೨೫-೯-೨೦೧೬) ಬೇಗ ಎದ್ದು ತಯಾರಾದೆವು. ಹರಿದ್ವಾರದಿಂದ ದೆಹಲಿಗೆ ಜನ ಶತಾಬ್ಧಿ ರೈಲು ೬.೨೦ಕ್ಕೆ . ನಾವು ಆಟೊರಿಕ್ಷಾದಲ್ಲಿ ರೈಲು ನಿಲ್ದಾಣಕ್ಕೆ ೫.೩೦ಗೆ ಹೋದೆವು. ರೈಲು ನಿಲ್ದಾಣ ನಡೆದು ಹೋಗುವಷ್ಟೇ ದೂರ ಆದರೂ ನಮ್ಮ ದೊಡ್ಡ ಬ್ಯಾಗ್ ಹೊತ್ತು ನಡೆಯಲು ಮನಸ್ಸಾಗಲಿಲ್ಲ. ಸಣ್ಣ ಬ್ಯಾಗ್ ಹೊಂದಿದವರು ನಡೆದೇ ಬಂದರು. ರೈಲು ನಿಲ್ದಾಣದಲ್ಲಿ ಅರ್ಧ ಗಂಟೆ ಕಾದೆವು.
೬.೨೫ಕ್ಕೆ ರೈಲು ಬಂತು. ಹತ್ತಲು ಕಿಕ್ಕಿರಿದು ಜನ ಸೇರಿದ್ದರು. ಎಲ್ಲರ ಕೈಯಲ್ಲೂ ದೊಡ್ಡ ದೊಡ್ಡ ಬ್ಯಾಗ್. ರೈಲು ಹೊರಡಲು ಶೀಟಿ ಕೇಳಿದಾಗ ಅಂತೂ ಹರಸಾಹಸಪಟ್ಟು ಮುಂದಿದ್ದವರನ್ನೂ ನೂಕಿ ಒಳಹಾಕಿ ರೈಲು ಏರಿದ್ದಾಯಿತು. ರೈಲು ಕೇವಲ ಐದೇ ನಿಮಿಷ ಅಲ್ಲಿ ನಿಲ್ಲುವುದು. ಐದು ನಿಮಿಷ ಖಂಡಿತಾ ಸಾಲದು. ಪ್ರಯಾಣಿಕರೆಲ್ಲರೂ ಪ್ರವಾಸ ಬಂದವರೇ ಅಲ್ಲಿಂದ ಹತ್ತುವುದು. ಎಲ್ಲರ ಬಳಿಯೂ ಲಗೇಜು ಜಾಸ್ತಿಯೇ ಇರುತ್ತದೆ. ಆರು ತಿಂಗಳು ಪ್ರವಾಸೀ ಸಮಯದಲ್ಲಾದರೂ ಆ ನಿಲ್ದಾಣದಲ್ಲಿ ಹತ್ತು ನಿಮಿಷ ನಿಲ್ಲಿಸುವುದು ಒಳ್ಳೆಯದು. ಆಗ ಜನ ಆತಂಕಪಡದೆ ರೈಲು ಏರಬಹುದು.
ಬೀಳ್ಕೊಡುಗೆ
ಸರಿಯಾದ ಸಮಯಕ್ಕೆ ೧೧.೩೦ಗೆ ದೆಹಲಿ ತಲಪಿದೆವು. ನಾವು (ಶೋಭಾ, ಸವಿತಾ, ರುಕ್ಮಿಣಿಮಾಲಾ, ಹೇಮಮಾಲಾ) ನಾಲ್ವರು ದೆಹಲಿಯಿಂದ ವಿಮಾನದಲ್ಲಿ ಬೆಂಗಳೂರಿಗೆ ಹೋಗುವವರಿದ್ದೆವು. ಬಾಕಿದ್ದವರೆಲ್ಲ ರೈಲಿನಲ್ಲಿ ಬೆಂಗಳೂರಿಗೆ. ಅವರ ರೈಲು ರಾತ್ರಿ ೯ ಗಂಟೆಗೆ. ನಮ್ಮ ವಿಮಾನ ರಾತ್ರೆ ೭.೧೫ಕ್ಕೆ. ನಾವು ಅಲ್ಲಿಂದ ಸೀದಾ ವಿಮಾನ ನಿಲ್ದಾಣಕ್ಕೆ ಹೋಗಿ ಸಮಯ ಕಳೆಯುವುದು ಎಂದು ತೀರ್ಮಾನಿಸಿಕೊಂಡೆವು. ನಾವು ಪರಸ್ಪರ ವಿದಾಯ ಹೇಳಿದೆವು. ವಿಮಾನ ನಿಲ್ದಾಣಕ್ಕೆ ಹೋಗಲು ನಾವು ಬಾಡಿಗೆ ಕಾರು ಏರಿದೆವು. (ರೂ.೬೦೦) ಊಟ ಮಾಡಿಯೇ ಹೋಗುವುದಾ? ಅಲ್ಲ ಅಲ್ಲಿ ಹೋಗಿ ಮಾಡುವುದಾ ಎಂಬ ಜಿಜ್ಞಾಸೆ ಕಾಡಿ ಆಗ ಊಟ ಮಾಡಲು ಸರಿಯಾದ ವೇಳೆಯಲ್ಲ ಎಂದೆನಿಸಿ ಸೀದಾ ವಿಮಾನನಿಲ್ದಾಣಕ್ಕೆ ಹೋದೆವು. ದೆಹಲಿ ಸೈಟ್ ಸೀಯಿಂಗ್ ಬೇಕಾ? ಎಲ್ಲ ನೋಡಿ ಸಂಜೆ ಹೋಗಬಹುದು ಎಂದು ಕಾರು ಚಾಲಕ ಹೇಳಿದ. ಅವರು ಮೂರು ಮಂದಿಯೂ ದೆಹಲಿ ಸುತ್ತಿದವರೇ ಆದ್ದರಿಂದ ಮನಸ್ಸು ಮಾಡಲಿಲ್ಲ. ನೋಡದವಳು ನಾನೊಬ್ಬಳೇ ಇದ್ದುದು.
ದೆಹಲಿ ವಿಮಾನ ನಿಲ್ದಾಣ
ಅಂತಾರಾಷ್ಟ್ರೀಯ ನಂ.೧. ವಿಮಾನ ನಿಲ್ದಾಣ ಎಂದು ಖ್ಯಾತಿಪಡೆದ ದೆಹಲಿಯ ಡೊಮೆಸ್ಟಿಕ್ ವಿಮಾನ ನಿಲ್ದಾಣದಲ್ಲಿ ಇಳಿದೆವು. ಕಾರು ಚಾಲಕ ನಮ್ಮ ಬ್ಯಾಗ್ ಪೇರಿಸಲು ಗಾಡಿಯನ್ನು ತಂದುಕೊಟ್ಟು ಅದರಲ್ಲಿ ಬ್ಯಾಗ್ ಹಾಕಿ ದುಡ್ಡುಪಡೆದು ಹೋದ. ನಾವು ಗಾಡಿ ತಳ್ಳುತ್ತ ಕೂರಲು ಸ್ಥಳವೆಲ್ಲಿದೆಯೆಂದು ನೋಡುತ್ತ ನಡೆದೆವು. ಎಲ್ಲೂ ಸರಿಯಾಗಿ ಬೆಂಚ್ ಹಾಕಿಲ್ಲ. ಕೆಲವೆಡೆ ಮಾತ್ರ ಒಂದೆರಡು ಬೆಂಚ್ ಕಾಣಿಸಿತು. ಅದರಲ್ಲೆಲ್ಲ ಜನ ಕೂತಿದ್ದರು. ಒಬ್ಬ ಹುಡುಗ ಕೂತಿದ್ದವ ಎದ್ದು ನಮಗೆ ಜಾಗ ಕೊಟ್ಟ. ಊಟಕ್ಕೆ ಏನಾದರೂ ಸಿಗುತ್ತದೋ ಎಂದು ನೋಡಲು ಹೋದೆವು. ಹೊರಗೆ ಹತ್ತಿರದಲ್ಲಿ ಒಂದೇ ಹೊಟೇಲು ಕಾಣಿಸಿತು. ಮಾಂಸಾಹಾರ ಸಸ್ಯಾಹಾರ ಒಟ್ಟಿಗೇ ಸಿದ್ಧಪಡಿಸುವ ಹೊಟೇಲು. ಅಲ್ಲಿ ತಿನ್ನಲು ಮನಸ್ಸಾಗಲಿಲ್ಲ. ಮತ್ತೆ ಸಣ್ಣ ಅಂಗಡಿಯಲ್ಲಿ ಎಂಟಿ‌ಆರ್ ಉಪಮಾ ಡಬ್ಬ ಕಾಣಿಸಿತು. ರೂ.೬೦ಕ್ಕೆ ಅದನ್ನು ತೆಗೆದುಕೊಂಡೆವು. ಬಿಸಿನೀರು ಹಾಕಿ ತಿನ್ನಲು ಅನುವುಮಾಡಿಕೊಟ್ಟರು. ಕೂರಲು ಸಾಕಷ್ಟು ಬೆಂಚ್ ಇರದ, ಸರಿಯಾದ ಹೊಟೇಲೂ ಇರದ ಇದು ಅಂತಾರಾಷ್ಟ್ರೀಯ ನಂ.೧ ವಿಮಾನ ನಿಲ್ದಾಣವಾ ಎಂದು ಮನದಲ್ಲೇ ಹೇಳಿಕೊಂಡೆ. ಬೆಂಗಳೂರು ವಿಮಾನ ನಿಲ್ದಾಣ ಇದಕ್ಕಿಂತ ಸಾವಿರಪಟ್ಟು ಚೆನ್ನಾಗಿದೆ ಎಂದೆನಿಸಿತು.
ತಿಂಡಿ ತಿಂದು ಅಲ್ಲಿ ಕೂರುವ ಬದಲು ಒಳಗೆ ಹೋಗಿ ಚೆಕ್ ಇನ್ ಮಾಡಿಸಿಕೊಂಡು ನಾವು ವಿಮಾನ ಹತ್ತುವ ಗೇಟ್ ಬಳಿಯೇ ಹೋದೆವು. ಅಲ್ಲಿ ಕೂರಲು ಸಾಕಷ್ಟು ವ್ಯವಸ್ಥೆ ಇತ್ತು. ಸಂಜೆ ಆರರವರೆಗೂ ಅಲ್ಲಿ ಕಾಲ ನೂಕಿದೆವು.

20160925_222450
ವಿಮಾನ ಪ್ರಯಾಣ
ಆರು ಗಂಟೆಗೆ ಇಂಡಿಗೋ ವಿಮಾನ ಹತ್ತಿ ಕೂತೆವು. ೭.೧೫ಕ್ಕೆ ಹೊರಟಿತು. ವಿಮಾನದಲ್ಲಿ ಚಾಕಲೇಟ್, ಕಾಪಿ, ಊಟ ಕೊಟ್ಟರು. ರಾತ್ರೆ ೧೦ ಗಂಟೆಗೆ ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಇಳಿದೆವು.

20160925_185852
ಮರಳಿ ಮೈಸೂರಿಗೆ ಪ್ರಯಾಣ
ನಮ್ಮ ಲಗೇಜು ಪಡೆದು ಹೊರಬಂದೆವು. ಹೇಮಮಾಲಾ ಅವರು ಅವರಿಗೆ ಪರಿಚಯ ಇರುವ ಬಾಡಿಗೆ ಕಾರನ್ನು ವಿಮಾನನಿಲ್ದಾಣಕ್ಕೆ ಬರಲು ಹೇಳಿದ್ದರು. ಮಹಾದೇವ ಸರಿಯಾದ ಸಮಯಕ್ಕೇ ಬಂದು ಕಾದಿದ್ದರು. ೧೦.೩೦ಗೆ ಕಾರು ಹತ್ತಿದೆವು. ಸವಿತಾ ದಾರಿಮಧ್ಯೆ ಹೆಬ್ಬಾಳದಲ್ಲಿ ಇಳಿದು ಅವಳ ಗಂಡನ ಜೊತೆ ಮನೆಗೆ ಹೋದಳು. ನಾವು ಮೈಸೂರಿಗೆ ಮಧ್ಯರಾತ್ರಿ ೧.೩೦ಗೆ ತಲಪಿದೆವು. ಅಲ್ಲಿಗೆ ನಮ್ಮ ೧೭ ದಿನದ ಪ್ರವಾಸ ಕೊನೆಗೊಂಡಿತು.

ಕರ್ನಾಟಕ ಸರ್ಕಾರ ಚಾರ್ಧಾಮ ಯಾತ್ರೆ ಮಾಡಿದವರಿಗೆ ರೂ. ೨೦೦೦೦ ಸಹಾಯಧನ ನೀಡುತ್ತದೆ. ಆದರೆ ಅದು ಸರ್ಕಾರದಿಂದ ಅನುಮೋದಿಸಲ್ಪಟ್ಟ ಪ್ರವಾಸೀಸಂಸ್ಥೆಯ ವತಿಯಿಂದ ಹೋದರೆ ಮಾತ್ರ ಕೊಡುವುದಂತೆ. ಹಾಗಾಗಿ ಹೆಚ್ಚಿನ ಮಂದಿಗೂ ಈ ಸಹಾಯಧನ ಲಭಿಸುವುದಿಲ್ಲ. ಅದರಿಂದ ವಂಚಿತರಾಗಬೇಕಾಗುತ್ತದೆ. ಇದು ನ್ಯಾಯವಾದ ದಾರಿಯಲ್ಲ. ನಾವು ಯಾತ್ರೆ ಮಾಡಿರುವುದಕ್ಕೆ ಸಾಕ್ಷಿಯಾಗಿ ಬಯೋಮೆಟ್ರಿಕ್ ಕಾರ್ಡ್ ಇರುತ್ತದೆ. ಅದನ್ನು ನೋಡಿ ಯಾತ್ರೆ ಮಾಡಿದವರಿಗೆ  ಸಹಾಯಧನ ನೀಡುವುದು ಸರಿಯಾದ ನಡೆ.

ಕೃತಜ್ಞಾತಾ ಸಮರ್ಪಣೆ
ಈ ಯಶಸ್ವಿ ಪ್ರವಾಸದ ಹಿಂದೆ ಅನೇಕ ಮಂದಿಯ ತ್ಯಾಗವಿದೆ. ನಮ್ಮ ಅತ್ತೆ ೮೭ರ ವಯೋಮಾನದವರು. ಅವರು ಈ ಇಳಿವಯಸ್ಸಿನಲ್ಲಿ ಮನಸ್ಸಿಲ್ಲದಿದ್ದರೂ ನನಗಾಗಿ ಮಂಗಳೂರಿನ ಮಗನ ಮನೆಗೆ ಪ್ರಯಾಣ ಮಾಡಿ ಅಲ್ಲಿಗೆ ಹೋಗಿದ್ದರು. ಅಲ್ಲಿ ಮಗ ಸೊಸೆ ಅವರನ್ನು ಪ್ರೀತಿಯಿಂದ ನೋಡಿಕೊಂಡಿದ್ದರು. ಇತ್ತ ಅನಂತನಿಗೆ ಕಛೇರಿಯಲ್ಲಿ ಸಾಕಷ್ಟು ಕೆಲಸದ ಒತ್ತಡ ಇದ್ದರೂ ನೀನು ಪ್ರವಾಸ ಹೋಗು ಎಂದು ನನ್ನನ್ನು ಖುಷಿಯಿಂದಲೇ ಕಳುಹಿಸಿಕೊಟ್ಟು, ಮನೆ, ಕಚೇರಿ ಎರಡನ್ನೂ ಯಶಸ್ವಿಯಾಗಿ ನಿಭಾಯಿಸಿದ್ದ. ಇವರೆಲ್ಲರ ಸಹಾಯದಿಂದ ಈ ಯಾತ್ರೆಯನ್ನು ಸುಗಮವಾಗಿ ಕೈಗೊಳ್ಳಲು ನನಗೆ ಸಾಧ್ಯವಾಯಿತು. ನಮ್ಮ ಜೊತೆಯಿದ್ದವರೆಲ್ಲರೂ ಪ್ರವಾಸದುದ್ದಕ್ಕೂ ಬಹಳ ಅನ್ಯೋನ್ಯದಿಂದ ಒಂದೇ ಮನೆಯವರಂತೆ ಇದ್ದು ಪ್ರವಾಸದ ಯಶಸ್ಸಿಗೆ ಕಾರಣಕರ್ತರಾಗಿದ್ದರು. ಪ್ರವಾಸದಲ್ಲಿ ಮುಖ್ಯವಾಗಿ ನಮ್ಮ ಹೊಟ್ಟೆ ಸರಿಯಾಗಿರಬೇಕು. ನಮ್ಮ ಹೊಟ್ಟೆ ಕೆಟ್ಟರೆ ಎಲ್ಲವೂ ಕೆಟ್ಟಂತೆಯೇ. ಶಶಿಕಲಾಕ್ಕ, ಸರಸ್ವತಕ್ಕ ನಮ್ಮ ಪಾಲಿಗೆ ಸಾಕ್ಷಾತ್ ಅನ್ನಪೂರ್ಣೆಯರೇ ಆಗಿ ನಮ್ಮೆಲ್ಲರ ಉದರದ ಯೋಗಕ್ಷೇಮದ ಹೊಣೆ ಹೊತ್ತು ಯಾರಿಗೂ ಹೊಟ್ಟೆ ಕೆಡದಂತೆ ನೋಡಿಕೊಳ್ಳುವಲ್ಲಿ ಅತ್ಯಂತ ಯಶಸ್ವಿಯಾಗಿದ್ದರು. ಇವರೆಲ್ಲರಿಗೂ ಅನಂತಾನಂತ ಧನ್ಯವಾದಗಳು. ವಿಠಲರಾಜು ಅವರು ಈ ಪ್ರವಾಸವನ್ನು ಪ್ರಯಾಸವಾಗದಂತೆ ಎಲ್ಲ ವ್ಯವಸ್ಥೆ ಮಾಡಿ ಬಹಳ ಚೆನ್ನಾಗಿ ಕೈಗೊಂಡಿದ್ದರು. ಅವರಿಗೆ ನಮ್ಮೆಲ್ಲಯಾತ್ರಿಕರ ಪರವಾಗಿ ಹೃತ್ಪೂರ್ವಕ ಧನ್ಯವಾದಗಳು.

 ಧಾರಾವಾಹಿ ಮುಗಿಯಿತು!

ವಿಶಾಲ ಬದರಿ
ಜೋಷಿಮಠದಿಂದ ೨೦-೯-೨೦೧೬ರಂದು ಹೊರಟು ೧೨ಗಂಟೆಗೆ ವಿಶಾಲಬದರಿ ತಲಪಿದೆವು. ಕೇದಾರನಾಥದಿಂದ (ಗೌರಿಕುಂಡ) ಬದರಿನಾಥ ಸುಮಾರು ೨೩೩ ಕಿ.ಮೀ. ದೂರದಲ್ಲಿದೆ. ರಿಷಿಕೇಶದಿಂದ ೩೦೧ ಕಿ.ಮೀ. ದೂರ. ಬದರಿ ಸಮುದ್ರಮಟ್ಟದಿಂದ ೧೦೩೫೦ ಅಡಿ ಎತ್ತರದಲ್ಲಿದೆ.

img_5019ಅಲ್ಲಿಯ ದೀಪಕ್ ವಸತಿಗೃಹದಲ್ಲಿ ಲಗೇಜು ಇಟ್ಟು ೧೨.೪೫ಕ್ಕೆ ವಾಪಾಸು ಬಸ್ ಹತ್ತಿ ಮಾನಾದೆಡೆಗೆ ಸಾಗಿದೆವು.
ಭಾರತದ ಕಟ್ಟಕಡೆಯ ಹಳ್ಳಿ ಮಾನಾ
ಈ ಯಾತ್ರೆ ಹೊರಡುವ ಮುನ್ನ, ಮಾನಾ ಹಳ್ಳಿಗೆ ಹೋಗಲಿದೆಯಾ ಎಂದು ಕೇಳಿಕೊಂಡಿದ್ದೆ. ಅದೇನೋ ಈ ಹಳ್ಳಿಯನ್ನು ನೋಡಲೇಬೇಕೆಂದು ಬಹಳ ಕುತೂಹಲವಿತ್ತು. ಆ ಆಸೆ ನೆರವೇರಿತು. ಬದರಿಯಿಂದ ಮಾನಾಗೆ ೪ ಕಿಮೀ ಇದೆ. ಭಾರತದ ಕೊನೆಯ ಹಳ್ಳಿ. ಅಲ್ಲಿಂದ ಮುಂದೆ ಚೀನಾ ಟಿಬೆಟ್ ಸರಹದ್ದು ಪ್ರಾರಂಭವಾಗುತ್ತದೆ. ಆ ಗಡಿಭಾಗದಲ್ಲಿ ಸೇನಾವಾಹನಕ್ಕೆ ಮಾತ್ರ ಪ್ರವೇಶಾವಕಾಶ. ನಾವು ಮಾನಾ ತಲಪುವಾಗ ಗಂಟೆ ಒಂದು ಆಗಿತ್ತು. ಹಳ್ಳಿಯಲ್ಲಿ ಸುತ್ತಿದಾಗ ಮನೆಮುಂದೆ ಕೆಲವರು ಉಣ್ಣೆ ಬೇರ್ಪಡಿಸುತ್ತಿರುವುದು, ಹೆಂಗಸರು ಸ್ವೆಟರ್ ತಯಾರಿಸುತ್ತ ಕೂತಿರುವುದು, ಸ್ವೆಟರ್ ಮಾರಾಟ ಮಾಡುತ್ತ ಇರುವುದು ಕಂಡಿತು. ಮಾನಾ ಹಳ್ಳಿಯಲ್ಲಿ ವರ್ಷದ ಆರು ತಿಂಗಳು ಮಾತ್ರ ಜನವಸತಿ ಇರುತ್ತದೆ. ಚಳಿಗಾಲದಲ್ಲಿ ವಿಪರೀತ ಹಿಮದಿಂದಾಗಿ ಅವರು ತಮ್ಮ ಸಾಕುಪ್ರಾಣಿ, ಜಾನುವಾರುಗಳೊಂದಿಗೆ (ಸಾಕಷ್ಟು ದನಕರುಗಳು ಅಲ್ಲಿ ಇದ್ದುದನ್ನು ಕಂಡೆವು) ಸುರಕ್ಷಿತ ಸ್ಥಳಕ್ಕೆ ವಸತಿ ಬದಲಾಯಿಸುತ್ತಾರೆ. ಅದೆಂತ ಜೀವನ ಅವರದು. ಒಂದು ವರ್ಷವಲ್ಲ, ಜೀವನಪರ್ಯಂತ ಇದೇ ವ್ಯವಸ್ಥೆಯಲ್ಲೇ ಬದುಕಬೇಕು. ಜೀವನೋಪಾಯಕ್ಕಾಗಿ ಕೃಷಿ, ಸ್ವೆಟರು ತಯಾರಿಸುವ, ಹೊಟೇಲು ನಡೆಸುವ ವೃತ್ತಿ ಅವರದು.

dsc00786

dsc00775 dsc00778 img_4962 img_4958

ವ್ಯಾಸ ಗುಹೆ, ಗಣೇಶ ಗುಹೆ,
ಮಾನಾದಲ್ಲಿ ವ್ಯಾಸಗುಹೆ, ಗಣೇಶ ಗುಹೆ ನೋಡಿದೆವು. ವ್ಯಾಸರು ಮಹಾಭಾರತ ಕಥೆ ಹೇಳುವಾಗ ಅದನ್ನು ಗಣಪತಿ ಬರೆದುಕೊಳ್ಳುತ್ತಿದ್ದ ಸ್ಥಳವಂತೆ.
ಪ್ರತೀತಿಯಲ್ಲಿರುವ ಕಥೆ: ವೇದವ್ಯಾಸರು ಮಹಾಭಾರತ ಗ್ರಂಥದ ರಚನೆ ಇಲ್ಲಿಯೇ ಕುಳಿತು ಮಾಡಿದರೆಂಬುದು ಪುರಾಣದ ಕಥೆ. ವ್ಯಾಸರು ಕಥೆ ಹೇಳುವುದನ್ನು ಬರೆದುಕೊಳ್ಳಲು ಗಣೇಶನಲ್ಲಿ ಕೇಳಿದಾಗ, ಅದಕ್ಕೆ ಗಣೇಶ ಸಮ್ಮತಿಸಿ ಒಂದು ಷರತ್ತು ವಿಧಿಸುತ್ತಾನೆ. ಮಧ್ಯೆ ಎಲ್ಲೂ ನಿಲ್ಲಿಸದೆ ಎಡೆಬಿಡದೆ ಹೇಳಿದರೆ ಮಾತ್ರ ಬರೆದುಕೊಳ್ಳುತ್ತೇನೆ. ಮಧ್ಯೆ ಹೇಳುವುದನ್ನು ನಿಲ್ಲಿಸಿದರೆ ನಾನೂ ಬರೆದುಕೊಳ್ಳುವುದನ್ನು ನಿಲ್ಲಿಸಿಬಿಡುತ್ತೇನೆ. ಗಣಪತಿಯ ಈ ಷರತ್ತಿಗೆ ವ್ಯಾಸರು ಒಪ್ಪಿ, ಎಲ್ಲೂ ನಿಲ್ಲಿಸದೆ ಕಥೆ ಹೇಳಲು ಪ್ರಾರಂಭಿಸಿ ಅದನ್ನು ಗಣೇಶ ಬರೆದುಕೊಂಡನು. (ವ್ಯಾಸ ಗುಹೆ ಹಾಗೂ ಗಣೇಶ ಗುಹೆ ಇರುವ ಸ್ಥಳ ಎರಡೂ ತುಂಬ ಹತ್ತಿರ ಇಲ್ಲ. ಆದರೂ ಹೇಗೆ ವ್ಯಾಸರು ಹೇಳಿದ ಕಥೆ ಗಣೇಶನಿಗೆ ಕೇಳಿಸಿತೊ ಗೊತ್ತಿಲ್ಲ! ಗಣೇಶನ ಕಿವಿ ತುಂಬ ದೊಡ್ಡದಿರುವುದರಿಂದ ಕಿವಿಯ ಕ್ಷಮತೆ ಹೆಚ್ಚಿದ್ದಿರಬಹುದು ಹಾಗಾಗಿ ಅಷ್ಟು ದೂರದಿಂದ ಹೇಳಿದ್ದೂ ಕೇಳಿಸಿರಬಹುದು ಎಂದು ಭಾವಿಸೋಣ!) ವ್ಯಾಸರು ಮಹಾಭಾರತದ ಕಥೆ ಹೇಳಲು ಗಣೇಶ ಅದನ್ನು ಬರೆದುಕೊಳ್ಳುತ್ತಿರಬೇಕಾದರೆ ಸರಸ್ವತೀನದಿಯ ಭೋರ್ಗರೆತದಿಂದ ಗಣೇಶನಿಗೆ ಸರಿಯಾಗಿ ಕೇಳದೆ ಇದ್ದದ್ದರಿಂದ ವ್ಯಾಸರು ಸಿಟ್ಟುಗೊಂಡು ಸರಸ್ವತಿಗೆ ಗುಪ್ತಗಾಮಿನಿಯಾಗಿ ಹರಿ ಎಂದು ಶಾಪಕೊಟ್ಟರಂತೆ. ಮುಂದೆ ಸರಸ್ವತೀ ಗುಪ್ತಗಾಮಿನಿಯಾಗಿ ಹರಿದಳಂತೆ. ಅಲ್ಲಿ ಅಲಕನಂದನದಿಗೆ ಸರಸ್ವತೀನದಿ ಸೇರಿಕೊಂಡು ಹರಿದು ಸಂಗಮವಾಗುವುದನ್ನು ನೋಡಿದೆವು.
ಇಲ್ಲಿ ವ್ಯಾಸ ಗುಹೆಯಲ್ಲಿ ವ್ಯಾಸರ ಮೂರ್ತಿ ಇದೆ. ಹಾಗೆಯೇ ಗಣೇಶ ಗುಹೆಯಲ್ಲಿ ಗಣೇಶನ ಮೂರ್ತಿ ಇದ್ದು, ಪೂಜೆ ನಡೆಯುತ್ತದೆ.

dsc00755

ಭೀಮಶಿಲೆ, ಭೀಮಪೂಲ್
ಮುಂದೆ ಹೋದಂತೆ ಬೃಹತ್ತಾದ ಭೀಮಶಿಲೆ ಕಾಣುತ್ತದೆ. ಅಲ್ಲಿ ಸರಸ್ವತೀನದಿ ಜೋರಾಗಿ ಹರಿಯುತ್ತ ಜಲಪಾತದಂತೆ ಕಾಣುತ್ತದೆ. ಆ ಮಧ್ಯಾಹ್ನ ಭೀಮಪೂಲಿನಲ್ಲಿ ಕಾಮನಬಿಲ್ಲು ಮೂಡಿ ಸುಂದರವಾಗಿ ಕಾಣುತ್ತಿತ್ತು. ಭೀಮಶಿಲೆ ಬಗ್ಗೆ ಕಥೆ ಹೀಗಿದೆ: ಕುರುಕ್ಷೇತ್ರ ಯುದ್ಧದಲ್ಲಿ ಅಪಾರ ಸಾವುನೋವುಗಳು ಆಗಿತ್ತಷ್ಟೆ. ಪಾಂಡವರು ಪ್ರಾಣಹತ್ಯಾ ದೋಷ ನಿವಾರಣೆಗಾಗಿ ಶಿವನನ್ನು ಅರಸುತ್ತ ಬರುತ್ತಿದ್ದಾಗ, ಸರಸ್ವತೀನದಿಯನ್ನು ದಾಟಬೇಕಾಗಿ ಬರುತ್ತದೆ. ಸರಸ್ವತಿಯ ಮಡಿಲಲ್ಲಿ ಕಾಲು ಊರಲು ಮನಸ್ಸಾಗದೆ, ನದಿ ದಾಟಲು ಭೀಮ ದೊಡ್ಡದಾದ ಬಂಡೆಯನ್ನೊಂದನ್ನು ಸರಸ್ವತೀನದಿಗೆ ಅಡ್ಡಲಾಗಿ ನಿಲ್ಲಿಸಿದನಂತೆ. ಭೀಮನ ಕೈ ಬೆರಳುಗಳ ಗುರುತುಗಳಿವೆ ಎಂದು ಅಲ್ಲಿರುವ ಚಿಕ್ಕ ಸೇತುವೆಯಂತೆ ನಿಂತಿರುವ ಒಂದು ದೊಡ್ಡದಾದ ಬಂಡೆಯನ್ನು ತೋರಿಸುತ್ತಾರೆ. ಅಲ್ಲೇ ಪಕ್ಕದಲ್ಲಿ ಭಾರತದ ಕೊನೆಯ ಚಹಾ ದುಖಾನೆ ಎಂಬ ಫಲಕವಿರುವ ಅಂಗಡಿ ಇದೆ. ಅಲ್ಲಿಗೆ ಹಳ್ಳಿ ಕೊನೆಯಾಗುತ್ತದೆ. ಇಲ್ಲಿ ಸರಸ್ವತಿಯ ಚಿಕ್ಕ ಮಂದಿರವಿದೆ. ಇಲ್ಲಿಂದ ಬಗ್ಗಿ ನೋಡಿದರೆ ನಮಗೆ ರಭಸದಿಂದ ಹರಿಯುತ್ತಿರುವ ಸರಸ್ವತೀನದಿ ಕಾಣುತ್ತದೆ. ಸುತ್ತ ಹಸಿರು ಹೊತ್ತ ಬೆಟ್ಟ ಸಾಲುಗಳು ಬಲು ಸುಂದರವಾಗಿ ಕಾಣುತ್ತದೆ.
ಅದನ್ನು ನೋಡಿ ಅಲ್ಲಿಂದ ನಾವು ಹಾಗೇ ಮುಂದುವರೆದು ವಸುಧಾರಾ ಫಾಲ್ಸ್ ಕಡೆಗೆ ಹೆಜ್ಜೆ ಹಾಕಿದೆವು.

dsc00766

OLYMPUS DIGITAL CAMERA

img_4992

img_4986

ವಸುಧಾರಾ ಫಾಲ್ಸ್
ಮಾನಾದಿಂದ ಸುಮಾರು ೫ ಕಿಮೀ ನಡೆದರೆ ವಸುಧಾರಾ ಫಾಲ್ಸ್ ಸಿಗುತ್ತದೆ. ಬಿರುಸಾಗಿ ನಡೆಯಲು ಸಾಧ್ಯವಾದವರು ಮಾತ್ರ ಇಲ್ಲಿಗೆ ಬರತಕ್ಕದ್ದು ಎಂದು ವಿಠಲರಾಜು ಕಟ್ಟುನಿಟ್ಟಾಗಿ ಹಿಂದಿನ ದಿನವೇ ಹೇಳಿದ್ದರು. ಸವಿತಾ, ಶಶಿಕಲಾ, ರಂಗಪ್ರಸಾದ, ಲತಾ, ರುಕ್ಮಿಣಿಮಾಲಾ, ಪೂರ್ಣಿಮಾ, ಸರೋಜ, ಶೋಭಾ, ವಿಠಲರಾಜು ಒಂಬತ್ತು ಮಂದಿ ಮಾತ್ರ ಭೀಮಪೂಲಿನಿಂದ ಮುಂದೆ ಹೆಜ್ಜೆ ಹಾಕಿದೆವು. ಬಾಕಿದ್ದವರೆಲ್ಲ ಮಾನಾ ಹಳ್ಳಿಯಲ್ಲೆ ಉಳಿದರು. ಅವರು ಹಳ್ಳಿ ಸುತ್ತಿ ವಿಸ್ತಾರವಾಗಿ ನೋಡಿ ಖುಷಿಪಟ್ಟರಂತೆ.
ನಾವು ನಡೆದೆವು ನಡೆದೆವು. ನಡೆದಷ್ಟೂ ಮುಗಿಯುವುದೇ ಇಲ್ಲ. ದೂರದಲ್ಲಿ ಒಮ್ಮೆ ಫಾಲ್ಸ್ ಕಂಡು ಓಹೋ ಇನ್ನು ದೂರವಿಲ್ಲ, ಕಾಣುತ್ತಲ್ಲ ಜಲಪಾತ ಅಂತ ಖುಷಿಯಿಂದ ಹೆಜ್ಜೆ ಹಾಕುತ್ತಿದ್ದೆವು. ಆದರೆ ಮುಂದೆ ಸಾಗಿದಂತೆಲ್ಲ ಜಲಪಾತ ಮಾಯ. ಎಷ್ಟೋ ದೂರವಿದೆ ಅದು. ನಡೆಯುವ ದಾರಿಯನ್ನು ಅಲ್ಲೇ ಲಭ್ಯವಿದ್ದ ಕಲ್ಲು ಹಾಕಿ ದಾರಿ ಚೆನ್ನಾಗಿ ಮಾಡಿದ್ದಾರೆ. ಕಲ್ಲುಗಳಿಗೆ ಅಲ್ಲಿ ಬರವಿಲ್ಲ. ದಾರಿ ಬದಿ ವಿಧವಿಧ ಹೂಗಳು ಕಾಣಿಸಿತು. ಬಂಡೆಗಲ್ಲುಗಳಲ್ಲಿ ಬಣ್ಣಬಣ್ಣದ ಪಾಚಿಯಂತೆ ಕಾಣುವ ಸಸ್ಯ. ಬೇರೆ ಬೇರೆ ಬಣ್ಣದ ಬಂಡೆಗಲ್ಲುಗಳು ಇದ್ದುವು. ದಾರಿಯುದ್ದಕ್ಕೂ ಕೆಳಗೆ ಅಲಕನಂದ ನದಿ ಹರಿಯುವುದು ಕಾಣುತ್ತದೆ. ಸುತ್ತಲೂ ಪರ್ವತಗಳಿದ್ದು, ಕುರುಚಲು ಸಸ್ಯಗಳಿವೆ. ದೊಡ್ಡ ಮರಗಳಿಲ್ಲ. ಬೆಟ್ಟಗಳು ಹಿಮದಿಂದ ಕೂಡಿ ಸುಂದರವಾಗಿ ಕಾಣುತ್ತಿತ್ತು.

img_5007

20160920_164159

20160920_170437

ಜಲಪಾತ ನೋಡಿ ಹಿಂದಿರುಗುತ್ತಿದ್ದವರನ್ನೆಲ್ಲ ಕೇಳುತ್ತಿದ್ದೆವು. ಇನ್ನು ಎಷ್ಟು ದೂರ ಇದೆಯೆಂದು. ಕೆಲವರು, ಇನ್ನು ಸ್ವಲ್ಪ ಅಷ್ಟೆ ಎಂದರೆ, ಇನ್ನು ಕೆಲವರು ನೀವೀಗ ಅರ್ಧ ದಾರಿ ಬಂದಿರಷ್ಟೆ. ಇನ್ನೂ ಸುಮಾರು ದೂರ ಹೋಗಬೇಕು ಅಂತ ಹೇಳುತ್ತಿದ್ದರು. ವಯಸ್ಸಾದ ಹೆಂಗಸರು ಫಾಲ್ಸ್ ನೋಡಿ ವಾಪಾಸು ಬರುತ್ತಿದ್ದದ್ದು ಮುಂದೆ ನೋಡಿ ನಡೆಯಲು ಸ್ಫೂರ್ತಿ ಬಂತು. ಈ ಕಲ್ಲು ದಾರಿಯಲ್ಲಿ ಬರಿಕಾಲಿನಲ್ಲಿ ನಡೆಯುತ್ತಿದ್ದ ಅವರನ್ನು ನೋಡಿ ಅಬ್ಬ ಇವರ ಸಾಹಸವೇ ಎನಿಸಿತು! ಅವರು ರಾಜಸ್ಥಾನದಿಂದ ಬಂದದ್ದಂತೆ. ಅಲ್ಲಿ ದಿನಾ ಸಾಕಷ್ಟು ದೂರದಿಂದ ನೀರು ಹೊತ್ತು ನಡೆದು ಅವರಿಗೆ ಅಭ್ಯಾಸವಿರಬಹುದು ಎಂದು ಭಾವಿಸಿಕೊಂಡೆ. ಮುಂದೆ ನಡೆದಂತೆ ಆಯಾಸವಾಗಿ, ಉಸಿರಾಟ ಕಷ್ಟವೆನಿಸುತ್ತಿತ್ತು. ಆದರೂ ಮುಂದೆ ಗುರಿ ಇರುವುದರಿಂದ ಅಲ್ಲಿ ಹೋಗಿ ತಲಪಲೇಬೇಕೆಂಬ ಅದಮ್ಯ ಉತ್ಸಾಹ ಬರಿಸಿಕೊಳ್ಳುತ್ತ ಮುಂದಕ್ಕೆ ಕಾಲು ಎತ್ತಿ ಹಾಕುತ್ತಿದ್ದೆವು. ಇದನ್ನು ಆಗಾಗ ಆಘ್ರಾಣಿಸಿ ಉಸಿರಾಟ ಸುಲಭವಾಗುತ್ತದೆ ಎಂದು ವಾಪಾಸು ಬರುತ್ತಿದ್ದ ಹೆಂಗಸೊಬ್ಬಳು ನನಗೆ ಕರ್ಪೂರ ಕೊಟ್ಟಳು. ಉಸ್ ಎಂದು ಕಷ್ಟವಾಗುವಾಗ ಆಗಾಗ ಅದನ್ನು ಮೂಸುತ್ತ ನಡೆದೆ. ಅಲ್ಲಿರುವ ಒಂದು ಸಸ್ಯವನ್ನು ಮೂಸಿದರೂ ಉಸಿರಾಟ ಸರಾಗವಾಗಿ ಆಗುತ್ತದೆ ಎಂದು ವಿಠಲರಾಜು ಆ ಸಸ್ಯ ತೋರಿಸಿದರು. ವಿಶಿಷ್ಟ ಪರಿಮಳವಿತ್ತದು. ಸಮುದ್ರಮಟ್ಟದಿಂದ ವಸುಧಾರಾ ಫಾಲ್ಸ್ ೧೩೦೦೦ ಅಡಿ ಮೇಲಿದೆ.
ಮೊದಮೊದಲು ಉತ್ಸಾಹ ಜಾಸ್ತಿಯಾಗಿದ್ದು, ಪ್ರಕೃತಿ ಸೌಂದರ್ಯವನ್ನು ನೋಡುತ್ತಲೇ, ಒಂದು ಹೂ ಕಂಡರೂ ಅದನ್ನು ಕ್ಯಾಮರಾದಲ್ಲಿ ಕ್ಲಿಕ್ಕಿಸುತ್ತ, ಬಂಡೆಕಲ್ಲು ಕಂಡರೂ ಆಹಾ ಎಷ್ಟು ಚಂದ ಇದೆ ಇದು ಎಂದು ಪೂರ್ಣಿಮಳಿಗೆ ತೋರಿಸುತ್ತ ಸಾಗುತ್ತಿದ್ದೆ. ಮುಂದೆ ಸಾಗುತ್ತಿದ್ದಂತೆ ಕ್ಯಾಮರಾ ಚೀಲದೊಳಗೆ ಸೇರಿತು. ಫೋಟೋ ತೆಗೆಯುವುದೂ ಬೇಡ, ಒಮ್ಮೆ ಅಲ್ಲಿ ತಲಪಿದರೆ ಸಾಕು ಅನಿಸಲು ತೊಡಗಿತು. ಒಮ್ಮೆ ಬೆಟ್ಟ ಹತ್ತಿದರೆ ಮತ್ತೆ ಇಳಿಯಬೇಕು. ಹತ್ತಿ ಉಸ್ ಎಂದು ನಿಂತು ಸುಧಾರಿಸಿ ಮುಂದೆ ನಡೆಯುತ್ತಿದ್ದೆವು. ಹೀಗೆ ಕಠಿಣವಾದ ದಾರಿ. ಪೂರ್ಣಿಮಾ ನಿಮ್ಮ ಹೆಸರನ್ನು ಪೂರ್ತಿ ಹೇಳಲೂ ಆಗದಷ್ಟು ಸುಸ್ತು. ಹಾಗೆ ಪೂರ್ಣಿ ಎನ್ನುತ್ತೇನೆ ಎಂದು ಆ ಸುಸ್ತಿನಲ್ಲೂ ತಮಾಷೆ ಮಾಡುತ್ತಿದ್ದೆ. ಹಾಗೆಯೇ ಹೇಳಿ. ಮನೆಯಲ್ಲಿ ಎಲ್ಲರೂ ನನ್ನನ್ನು ಹಾಗೆಯೇ ಕರೆಯುವುದು ಎಂದು ಅವರೂ ಉಸ್ ಎಂದು ಉಸಿರು ಬಿಡುತ್ತ ಸಮ್ಮತಿಸಿದರು!

20160920_181246

ಪರಿಮಳದ ಸಸ್ಯ

img_5017

img_5010

img_4999

img_5009

OLYMPUS DIGITAL CAMERA

ಊಟ ಮಾಡದೆ ನಾವು ಚಾರಣ ಹೊರಟದ್ದು. ಹೊಟ್ಟೆಯೂ ಹಸಿಯಲು ತೊಡಗಿ ಸುಸ್ತು ಹೆಚ್ಚಾಯಿತು. ಚೀಲದಲ್ಲಿ ನಾಲ್ಕು ಸೇಬು, ಬಾದಾಮಿ ಇತ್ತು. ಒಂದು ಸೇಬು, ನಾಲ್ಕಾರು ಬಾದಾಮಿ ತಿಂದದ್ದೇ ದೇಹ ಚೈತನ್ಯ ಪಡೆಯಿತು. ಮುಂದೆ ನಡೆಯಲು ಶಕ್ತಿ ನೀಡಿತು. ನನ್ನೊಡನೆ ಇದ್ದವರಿಗೆಲ್ಲ ಸೇಬು, ಬಾದಾಮಿ ಕೊಟ್ಟೆ. ಹಸಿವು ಆದರೆ ದೇಹದಲ್ಲಿ ತ್ರಾಣವೇ ಇರುವುದಿಲ್ಲ, ಹಸಿವೆಂದರೆ ಹೇಗಿರುತ್ತದೆ ಎಂಬುದು ಅಲ್ಲಿ ಮನವರಿಕೆಯಾಯಿತು. ಅಂತೂ ನಾಲ್ಕು ಗಂಟೆಗೆ ವಸುಧಾರಾ ಫಾಲ್ಸ್ ಬಳಿ ತಲಪಿಯೇ ಬಿಟ್ಟೆವು. ನಾಲ್ಕು ಮಂದಿ ೩.೩೦ಕ್ಕೇ ತಲಪಿದರು. ಶೋಭಾ ಮುಕ್ಕಾಲು ದಾರಿ ಕ್ರಮಿಸಿದವರು ಕಡೇ ಘಳಿಗೆಯಲ್ಲಿ ಹಿಂದಕ್ಕೇ ವಾಪಾಸಾದರು. ವಾಪಾಸು ಹೋಗಲು ತುಂಬ ತಡವಾದೀತು, ತನ್ನಿಂದ ಇತರರಿಗೆ ತೊಂದರೆಯಾಗುವುದು ಬೇಡ ಎಂದು ಅವರು ಹಿಂದೆ ಹೋಗುವ ತೀರ್ಮಾನ ಮಾಡಿದ್ದಂತೆ.
ವಸುಧಾರಾ ಫಾಲ್ಸ್ ಬಲು ಎತ್ತರದ ಬೆಟ್ಟದಿಂದ ಕೆಳಗೆ ಅಲೆ‌ಅಲೆಯಾಗಿ ಧುಮುಕುತ್ತದೆ. ಓಹ್ ಎಂಥ ಸೌಂದರ್ಯವದು. ಮೇಲೆ ನಿಂತಿದ್ದ ನಮ್ಮ ಮುಖದತ್ತ ನೀರಿನ ಅಲೆಗಳು ಗಾಳಿಯಲ್ಲಿ ಸೋಕಿದಾಗ ಆಹಾ ಇಲ್ಲಿ ಬಂದದ್ದೂ ಸಾರ್ಥಕವೆನಿಸುವಂಥ ಭಾವ ಆ ಕ್ಷಣ ಮೂಡುತ್ತದೆ. ಅಲ್ಲಿ ನಮ್ಮ ಮುಖಕ್ಕೆ ನೀರು ಸೋಕದೆ ಇದ್ದರೆ ನಾವು ಏನೋ ಪಾಪ ಮಾಡಿದ್ದೇವೆಂದು ಪ್ರತೀತಿಯಲ್ಲಿದೆಯಂತೆ! ನಮ್ಮೆಲ್ಲರ ಮುಖಕ್ಕೂ ನೀರಹನಿ ಪನ್ನೀರಿನಂತೆ ಸೋಕಿತ್ತು. ಇದರಿಂದ ಸದ್ಯ ನಾವ್ಯಾರೂ ಯಾವ ಪಾಪವೂ ಮಾಡಿಲ್ಲವೆಂಬುದು ಖಾತ್ರಿಯಾಯಿತು!

20160920_162237

20160920_161333

20160920_160748

OLYMPUS DIGITAL CAMERA

ಅಷ್ಟವಸುಗಳು ಮೂವತ್ತು ಸಾವಿರ ವರ್ಷ ಇಲ್ಲಿ ತಪಸ್ಸು ಮಾಡಿದ್ದರಂತೆ. ಅಬ್ಬ ಅವರು ತಪಸ್ಸಿಗೆ ಕೂರಲು ಕಂಡುಹಿಡಿದ ಸ್ಥಳ ಎಂತದ್ದು ಮಾರಾಯ್ತಿ, ಮಾರಾಯ್ರೆ!
ಅಲ್ಲಿ ಭಾವಚಿತ್ರ ತೆಗೆಸಿಕೊಂಡೆವು. ನಾವು ಕೆಳಗೆ ನೀರಿನ ಬಳಿ ಇಳಿಯಲಿಲ್ಲ. ಇಳಿದರೆ ವಾಪಾಸು ಹೋಗಲು ತಡವಾಗುತ್ತದೆ. ೫ಕಿಮೀ ಹಿಂದಕ್ಕೆ ನಡೆಯಬೇಕಲ್ಲ. ಕತ್ತಲೆ ಆದರೆ ಇಲ್ಲಿ ನಡೆಯುವುದು ಕಷ್ಟ ಎಂದು ನಾವು ಕೇವಲ ಇಪ್ಪತೈದು ನಿಮಿಷ ಅಲ್ಲಿದ್ದು ೪.೨೫ಕ್ಕೆ ಹಿಂದಕ್ಕೆ ವಾಪಾಸು ನಡೆಯಲು ತೀರ್ಮಾನಿಸಿದೆವು.
ನಡೆದು ಬರುತ್ತಿರುವಾಗ ಹಿಮತುಂಬಿದ ಬೆಟ್ಟ ಬಲು ಸೊಗಸಾಗಿ ಕಾಣುತ್ತಿತ್ತು. ಪೂರ್ಣಿಮಾ ಹಾಗೂ ನಾನು ಅದನ್ನು ನೋಡುತ್ತಲೇ ಓಹೋ ಹಿಮಾಲಯ ಆಹಾ ಹಿಮಾಲಯ ಎಂದು ಹಾಡುಕಟ್ಟಿ ಹಾಡುತ್ತ ನಡೆದೆವು. ಹೋದಾಗ ಇದ್ದ ಸುಸ್ತು ಮಾಯವಾಗಿತ್ತು! ಬರುತ್ತ, ಕೆಳ ಭಾಗದಲ್ಲಿ ಸೇನೆಯ ಇಬ್ಬರು ತರುಣರು ಕಾವಲು ಕಾಯುತ್ತಿರುವುದನ್ನು ಕಂಡೆವು. ಚಳಿಮಳೆಗೂ ನಿರಂತರ ಕೆಲಸ ಮಾಡಬೇಕು ಅವರು. ಆ ನಿರ್ಜನ ಪ್ರದೇಶದಲ್ಲಿ ಅಷ್ಟು ದೂರದಲ್ಲಿ ಇಬ್ಬರೇ ನಿಂತು ಸದಾ ಕಟ್ಟೆಚ್ಚರದಲ್ಲಿದ್ದು ಕರ್ತವ್ಯ ನಿರ್ವಹಿಸುತ್ತಾರಲ್ಲ, ಅವರನ್ನು ನೋಡುವಾಗ ಗೌರವ ಭಾವ ಮೂಡಿ ಮನಸ್ಸು ಆದ್ರವಾಗುತ್ತದೆ. ಅವರ ಈ ಕಾರ್ಯದಿಂದ ತಾನೆ ಇಲ್ಲಿ ನಾವೆಲ್ಲಾ ನೆಮ್ಮದಿಯಿಂದ ಜೀವಿಸುತ್ತಿದ್ದೇವೆ ಎಂಬುದು ನಮ್ಮ ನೆನಪಿನಲ್ಲಿ ಸದಾ ಇರಬೇಕು. (ಕೆಳಗಿನ ಚಿತ್ರದ ಮೇಲೆ ಕ್ಲಿಕ್ ಮಾಡಿ ದೊಡ್ಡದಾಗಿ ಮಾಡಿದಾಗ ಇಬ್ಬರು ನಿಂತದ್ದು ಕಾಣುತ್ತದೆ)

20160920_164213

ಸೇನಾ ಸಿಬ್ಬಂದಿ ಕಾವಲು

ನಾವು ವಾಪಾಸು ಬರುತ್ತಿರಬೇಕಾದರೆ ಕೆಲವು ಮಂದಿ ಜಲಪಾತದೆಡೆಗೆ ಹೋಗುತ್ತಿದ್ದರು. ನಾವು ಅವರಿಗೆ ಸ್ಪಷ್ಟವಾಗಿ ಹೇಳಿದೆವು. ಈಗ ಹೋಗಬೇಡಿ. ಕತ್ತಲಾಗುತ್ತದೆ. ನೀವು ಅಲ್ಲಿಗೆ ತಲಪುವಾಗಲೇ ಕತ್ತಲಾದೀತು. ತುಂಬ ನಡೆಯಬೇಕು. ಮತ್ತೆ ಹಿಂದೆ ಬರುವುದು ಕಷ್ಟ. ಆದರೆ ಅವರು ನಮ್ಮ ಮಾತಿಗೆ ಕಿವಿಗೊಡದೆ ಮುಂದೆ ಹೋದರು. ಹೇಗೆ ಹಿಂದೆ ಬಂದರೋ? ಕೆಲವರಂತೂ ಚಳಿ ತಡೆಯಲು ಸ್ವೆಟರ್ ಇಲ್ಲದೆ ಹೋಗುತ್ತಿದ್ದರು. ಒಬ್ಬಳಂತೂ ತೋಳಿಲ್ಲದ ಅಂಗಿ ಧರಿಸಿದ್ದಳು. ಚಳಿ ಮೆಲ್ಲಮೆಲ್ಲನೆ ಆವರಿಸಿಕೊಳ್ಳಲು ಹವಣಿಸುತ್ತಿತ್ತು. ಸುತ್ತಲೂ ಬೆಟ್ಟದಿಂದಾವರಿಸಿದ ಕಾರಣ ಸಂಜೆ ಐದು ಗಂಟೆಯಾಗುವಾಗಲೇ ಸೂರ್ಯ ಕಾಣಿಸುವುದಿಲ್ಲ. ಕತ್ತಲು ಬೇಗ ಆಗುತ್ತದೆ. ಎಷ್ಟು ದೂರ ನಡೆಯಬೇಕೆಂಬ ತಿಳಿವಳಿಕೆ ಇಲ್ಲದೆ ಹೋಗುತ್ತಿದ್ದರು. ವಸುಧಾರಾ ಫಾಲ್ಸ್ ಕಡೆಗೆ ಹೋಗಲು ಪ್ರಶಸ್ತ ಕಾಲ ಬೆಳಗ್ಗೆ ಬೇಗ ಹೊರಟು ಹೋಗಬೇಕು. ಆಗ ಆರಾಮವಾಗಿ ನಡೆಯುತ್ತ, ಅಲ್ಲಿ ಜಲಪಾತವನ್ನು ಮನದಣಿಯೆ ನೋಡಿ ಆನಂದಿಸಿ ವಾಪಾಸು ಬರಬಹುದು.
ಸಂಜೆ ೬.೪೫ಕ್ಕೆ ನಾವು ಮಾನ ತಲಪಿದೆವು. ತಲಪಿ ವ್ಯಾಸಗುಹೆ, ಗಣಪತಿ ಮಂದಿರ ಎಲ್ಲ ನೋಡಿದೆವು. ಓಹ್ ೧.೩೦ರಿಂದ ೬.೪೫ರವರೆಗೆ ಉಳಿದವರು ನಮ್ಮನ್ನು ಕಾಯುತ್ತ ಅಲ್ಲೇ ಇದ್ದರು. ಬಸ್ಸಿನಲ್ಲಿ ಕುಳಿತು ಹರಟುತ್ತಿದ್ದರು. ಅವರ ಈ ತಾಳ್ಮೆಗೆ ನಮೋನಮಃ. ಅವರು ಹಳ್ಳಿ‌ಇಡೀ ತಿರುಗಿ, ಅಲ್ಲಿ ಸಿಕ್ಕುವ ಮೊಮೋ ಎಂಬ ತಿಂಡಿ, ಕುರುಕಲು ತಿಂಡಿ, ಜ್ಯೂಸ್ ಎಲ್ಲ ರುಚಿ ನೋಡಿದರಂತೆ.
ಬದರಿನಾರಾಯಣನ ದರ್ಶನ
ಬಸ್ ಹತ್ತಿ ನಾವು ಬದರಿಗೆ ಬಂದೆವು. ಕೋಣೆಗೆ ಹೋಗಿ ಮುಖ ತೊಳೆದು ಬದರಿನಾರಾಯಣ ದೇವಾಲಯಕ್ಕೆ ಬಂದೆವು. ನಮ್ಮ ವಸತಿಗೃಹದಿಂದ ನಾಲ್ಕುಮಾರು ದೂರದಲ್ಲಿ ದೇವಾಲಯವಿದ್ದುದು. ತುಂಬ ಜನ ಇದ್ದರು. ಒಳಗೆ ಆಗ ಪ್ರವೇಶವಿರಲಿಲ್ಲ. ಹೊರಗಿನಿಂದಲೇ ದೇವರ ದರ್ಶನ ಮಾಡಿದೆವು.

OLYMPUS DIGITAL CAMERA

OLYMPUS DIGITAL CAMERA

ಅನಂತಮಠ
ಬದರಿಯಲ್ಲಿ ಉಡುಪಿ ಪೇಜಾವರದ ಅನಂತಮಠ ಇದೆ. ಅಲ್ಲಿ ಊಟ ಮಾಡುವ ಬಹಳ ಚೆನ್ನಾಗಿರುತ್ತದಂತೆ ಎಂದು ಸರೋಜ ಹೇಳಿದ್ದರು. ಸರೋಜ ಅವರಿಗೆ ಗೊತ್ತಿದ್ದವರಿಗೆ ದೂರವಾಣಿ ಮಾಡಿ ಮಧ್ಯಾಹ್ನವೇ ಕೇಳಿದ್ದರು. ಬನ್ನಿ ಎಂದು ಅಲ್ಲಿಂದ ಆಹ್ವಾನ ಬಂದಿತ್ತಂತೆ. ಆದರೆ ಊಟವಿಲ್ಲ. ಇವತ್ತು ತಿಂಡಿ ಎಂದಿದ್ದರಂತೆ. ನಾವೂ ಖುಷಿಯಿಂದಲೇ ಅವರ ಈ ಮಾತಿಗೆ ಸಮ್ಮತಿ ಇತ್ತಿದ್ದೆವು. ಸರೋಜರಿಗೂ ಅನಂತಮಠ ಇರುವುದು ಎಲ್ಲಿ ಎಂದು ಗೊತ್ತಿಲ್ಲ. ಕೇಳಿಕೊಂಡು ನಡೆದೆವು. ಅನಂತಮಠ ತಲಪಲು ಸ್ವಲ್ಪ ಹೆಚ್ಚೇ ದೂರ ನಡೆಯಬೇಕಾಯಿತು. ದೇವಾಲಯದಿಂದ ಸುಮಾರು ಒಂದು ಕಿಮೀ ದೂರ ಇರಬಹುದು. ಆಗ ಕೆಲವರ ತಾಳ್ಮೆ ತಪ್ಪಲು ಸುರುವಾಯಿತು. ಆ ಪರಿಣಾಮ ನಿಷ್ಟುರವಾಗಿ ಮಾತಾಡಿದರು. ಬೇಕಿತ್ತ ಈ ಉಸಾಬಾರಿ ನನಗೆ ಎಂದು ಸರೋಜ ನಮ್ಮಲ್ಲಿ ಹೇಳಿಕೊಂಡರು. ಆಗ ನಾವು, ‘ಇದೂ ಒಂದು ಅನುಭವ ತಾನೆ. ನಮಗೆ ಅನಂತಮಠ ನೋಡಿದ ಹಾಗೂ ಆಯಿತು. ಇಂಥ ಮಾತಿಗೆಲ್ಲ ನೀವೇನು ತಲೆಕೆಡಿಸಿಕೊಳ್ಳಬೇಡಿ’ ಎಂದು ನಾವು ಕೆಲವರು ಸಂತೈಸಿದೆವು. ಮನುಜನ ತಾಳ್ಮೆ ಪರೀಕ್ಷಿಸುವ ಕಾಲವದು. ಇಂಥ ಒಳ್ಳೆಯ ಯಾತ್ರೆ ಮಾಡಿದರೂ, ಊಟಕ್ಕೆ ಸ್ವಲ್ಪ ತಡವಾದರೂ ಅದನ್ನು ಸಹಿಸುವ ತಾಳ್ಮೆ ಸ್ವಲ್ಪವೂ ಬರುವುದಿಲ್ಲವಲ್ಲ? ಎಂಥ ವಿಪರ್ಯಾಸವಿದು. ಎಂದು ಮನದಲ್ಲೇ ಮಂಥನ ನಡೆಸಿದೆ. ಕೆಲವರಿಗೆ ಹೊಟ್ಟೆ ಹಸಿದರೆ ಬಲುಬೇಗ ಸಿಟ್ಟು ಬರುತ್ತದಂತೆ. ಹಾಗಿದೆ ನಮ್ಮ ಹೊಟ್ಟೆಪಾಡು!
ಅನಂತಮಠಕ್ಕೆ ಹೋದೆವು. ಅಲ್ಲಿ ಕೂಡಲೇ ನಮ್ಮನ್ನು ಊಟದ ಕೋಣೆಗೆ ಕರೆದುಕೊಂಡು ಹೋಗಿ ಒಗ್ಗರಣೆ ಹಾಕಿದ ದಪ್ಪ‌ಅವಲಕ್ಕಿ ಕೊಟ್ಟರು. ಹೊಟ್ಟೆ ತುಂಬ ತಿಂದೆವು. ಹಸಿದ ಹೊಟ್ಟೆಗೆ ಬಿಸಿಬಿಸಿಯಾಗಿ ಬಲು ರುಚಿಯಾಗಿತ್ತು. ಮಠಕ್ಕೆ ಯತಾನುಶಕ್ತಿ ಕಾಣಿಕೆ ಸಲ್ಲಿಸಿ, ಸರೋಜರಿಗೆ ಕೃತಜ್ಞತೆ ಸಲ್ಲಿಸಿದೆವು. ಈ ಮೊದಲು ಕೋಪಗೊಂಡು ಮಾತಾಡಿದವರೂ ಕ್ಷಮೆ ಕೇಳಿ ದೊಡ್ಡವರೆನಿಸಿಕೊಂಡದ್ದು ನೋಡಿ ನನಗಂತೂ ತುಂಬ ಖುಷಿ ಆಯಿತು. ಸರೋಜರೂ ನಿರಾಳರಾದರು. ನಾವು ನಡೆಯುತ್ತ ವಸತಿಗೃಹಕ್ಕೆ ಬಂದೆವು.
ಕೋಣೆಯಲ್ಲಿ ನಾನು, ಸವಿತಾ, ಲತಾ ಇದ್ದುದು. ಹೊರಗೆ ಅಷ್ಟು ಚಳಿ ಎನಿಸಿರಲಿಲ್ಲ. ತಲೆಗೆ ಟೋಪಿ ಹಾಕಲು ಮರೆತು ಸುತ್ತಿದ್ದೆ. ಆದರೂ ಚಳಿ ಆಗಿರಲಿಲ್ಲ. ಆದರೆ ಕೋಣೆಯೊಳಗೆ ಕಿಟಕಿಗಳೆಲ್ಲ ಹಾಕಿಯೇ ಇದ್ದರೂ ತಣ್ಣಗೆ ಕೊರೆಯುತ್ತಿತ್ತು. ಹಾಸಿಗೆ ತಣ್ಣಗಾಗಿತ್ತು. ಅದರಲ್ಲೇ ಮಲಗಿ ನಿದ್ರಿಸಿದೆವು.
ಉದರಪೋಷಣೆ
ಬೆಳಗ್ಗೆ (೨೧-೯-೧೬) ಆರು ಗಂಟೆಗೆ ಎದ್ದು ಬಿಸಿನೀರು ಪಡೆದು ಸ್ನಾನ ಮಾಡಿದೆವು. ಒಂದು ಬಾಲ್ದಿಗೆ ರೂ.೩೦. ಲತಾ ಅವರೇ ಕೊಟ್ಟರು. ಎದ್ದು ಸ್ನಾನವಾಗಿ ಸುಮ್ಮನೆ ಕೂತೆವು. ಇನ್ನು ಕೂತು ಕಾಲ ಕಳೆಯುವ ಬದಲು ದೇವಾಲಯಕ್ಕೆ ಹೋಗಬಹುದು. ಎಲ್ಲರೂ ಹೊರಟಿದ್ದಾರ ನೋಡಿ ಬರುತ್ತೇನೆಂದು ಎದ್ದು ಹೊರಗೆ ಬಂದು ನೋಡಿದರೆ ಕೆಲವರ ಕೋಣೆಗಳೆಲ್ಲ ಬೀಗ ಹಾಕಿವೆ. ನಮಗೆ ಹೇಳದೆಯೇ ದೇವಾಲಯಕ್ಕೆ ಹೋಗಿದ್ದರು. ಹೇಳಬೇಕಿತ್ತು ಅವರು ಎನಿಸಿ ಒಂದುಕ್ಷಣ ಬೇಸರವೆನಿಸಿತು. ನಮ್ಮದೇ ತಪ್ಪು. ಹೊರಟು ಕೂಡ ಕೋಣೆಯಲ್ಲೇ ಕೂತದ್ದು ನಮ್ಮದೇ ತಪ್ಪು ತಾನೆ ಎಂದು ಮರುಕ್ಷಣವೇ ಬೇಸರ ನೀಗಿಸಿಕೊಂಡೆ. ನಾವು ಮೂವರು ೮ ಗಂಟೆಗೆ ಹೊರಟು ದೇವಾಲಯದ ಹತ್ತಿರವಿರುವ ಖಾನಾವಳಿಯಲ್ಲಿ ದೋಸೆ, ಪೂರಿ ತಿಂದೆವು. ದೋಸೆ ಅಷ್ಟು ಚೆನ್ನಾಗಿರಲಿಲ್ಲ. ಈರುಳ್ಳಿ ದೋಸೆ ಎಂದರೆ ದೋಸೆ ಮೇಲೆ ಸ್ವಲ್ಪ ನೀರುಳ್ಳಿ ಚೂರು ಹಾಕಿ ಕೊಡುತ್ತಾರೆ. ಚಟ್ನಿ ಬಾಯಿಗೆ ಹಾಕಲೇ ಸಾಧ್ಯವಿರಲಿಲ್ಲ. ನಮ್ಮ ಊರಿನ ತಿಂಡಿ ತಿಂದದ್ದು ನಮ್ಮ ತಪ್ಪು. ಅಲ್ಲೆಲ್ಲ ದೋಸೆ ತಿನ್ನಬಾರದು. ಚಪಾತಿ, ಪೂರಿಯನ್ನೇ ತಿನ್ನಬೇಕು. ಅದೇ ತುಂಬ ಚೆನ್ನಾಗಿರುತ್ತದೆ.
ಬಾಗಿಲನು ತೆರೆದು ದರುಶನ ತೋರೋ ಬದರಿನಾರಾಯಣನೆ
ದೇವಾಲಯಕ್ಕೆ ಹೋದೆವು. ಒಳಗೆ ಹೋಗಲು ನೋಡಿದರೆ ಒಂದು ಮೈಲಿ ಉದ್ದದ ಸರತಿ ಸಾಲು. ನಾವೂ ಸರತಿ ಸಾಲಿನಲ್ಲಿ ಸೇರಿಕೊಂಡೆವು. ೯ಗಂಟೆಗೆ ಸರತಿಯಲ್ಲಿ ನಿಂತು ಹತ್ತು ಘಂಟೆಗೆ ದೇವರ ದರ್ಶನ ಮಾಡಿದೆವು. ಗರ್ಭಗೃಹದಲ್ಲಿ ಕಪ್ಪುಸಾಲಿಗ್ರಾಮ ಶಿಲೆಯ ಧ್ಯಾನಮುದ್ರೆಯಲ್ಲಿರುವ ಚತುರ್ಭುಜಗಳಿರುವ ನಾರಾಯಣನ ವಿಗ್ರಹವಿದೆ. ಎರಡು ಕೈಗಳು ಧ್ಯಾನಮುದ್ರೆಯಲ್ಲೂ, ಮತ್ತೆರಡು ಕೈಗಳಲ್ಲಿ ಶಂಖಚಕ್ರಗಳಿವೆ. ನಾರಾಯಣದ ಬಲಭಾಗದಲ್ಲಿ ಕುಬೇರ, ಗಣೇಶ ಮತ್ತು ಗರುಡ ಮೂರ್ತಿಗಳಿವೆ. ಎಡಭಾಗದಲ್ಲಿ ಲಕ್ಷ್ಮೀ ಚಾಮರ ಬೀಸುತ್ತ ನಿಂತ ಮೂರ್ತಿ ಇದೆ. ಒಂದು ನಿಮಿಷ ದೇವರನ್ನು ನೋಡಲೂ ಬಿಡದಂತೆ ಮುಂದೆ ಹೋಗಿ ಎಂದು ನೂಕುತ್ತಾರೆ. ಆದರೂ ಕಣ್ಣುತುಂಬ ಮೂರ್ತಿ ನೋಡಿಯೇ ನಾವು ಅಲ್ಲಿಂದ ತೆರಳಿದ್ದು.
ಲತಾ ಅವರು ದೇವಾಲಯದ ಎದುರು ನಿಂತು ನಮ್ಮ ಮೂವರ ಪೋಟೋ ಪೋಟೋಗ್ರಾಫರರ ಕ್ಯಾಮರಾದಿಂದ ರೂ. ೧೦೦ ಕೊಟ್ಟು ಕ್ಲಿಕ್ಕಿಸಿಕೊಂಡರು. ಇಂಥ ವೃತ್ತಿ ಅಲ್ಲಿ ಅವರ ಹೊಟ್ಟೆಪಾಡು. ತುಂಬ ಜನ ಹೆಗಲಲ್ಲಿ ಕ್ಯಾಮರಾ ಹಾಕಿಕೊಂಡು ಭಕ್ತರ ಗಮನ ಸೆಳೆದು ಕ್ಲಿಕ್ಕಿಸಲೆ ಎಂದು ಕೇಳಿಕೊಳ್ಳುತ್ತಿದ್ದರು. ಹೆಚ್ಚಿನ ಮಂದಿಯೂ ಭೇಟಿ ಸ್ಮರಣೀಯವಾಗಿರಲಿ ಎಂದೋ ಏನೋ ಚಿತ್ರ ತೆಗೆಸಿಕೊಳ್ಳುತ್ತಿದ್ದರು. ದೇವರ ದರ್ಶನಮಾಡಿ ಬಂದ ಬಳಿಕ ಭಾವಚಿತ್ರ ಕೊಡುತ್ತಿದ್ದರು.
ತಪ್ತಕುಂಡದಲ್ಲಿ ಬಿಸಿನೀರು ಹೊಂಡವಿದೆ. ನಾವು ಕೆಲವರು ಅಲ್ಲಿ ಸ್ನಾನ ಮಾಡಲಿಲ್ಲ. ಕೆಲವರು ಬೆಳಗ್ಗೆಯೇ ಹೋಗಿ ಸ್ನಾನ ಮಾಡಿ ದೇವಾಲಯಕ್ಕೆ ಹೋಗಿ ಬಂದರು.

img_5020
ಬದರಿ ಬಗ್ಗೆ ವಿವರಣೆ :
ಬದರಿನಾಥ ಭಾರತದ ಉತ್ತರಾಖಂಡ ರಾಜ್ಯದ ಚಮೋಲಿ ಜಿಲ್ಲೆಯಲ್ಲಿನ ಒಂದು ಪುಟ್ಟ ಪಟ್ಟಣ. ಹಿಂದೂ ಧರ್ಮೀಯರಿಗೆ ಅತಿ ಪಾವನವೆಂದು ಪರಿಗಣಿಸಲ್ಪಡುವ ಕ್ಷೇತ್ರಗಳಲ್ಲಿ ಬದರಿನಾಥ ಅತಿ ಪ್ರಮುಖವಾದುದು. ಚಾರ್‌ಧಾಮ್ (ಚತುರ್ಧಾಮ)ಗಳಲ್ಲಿ ಬದರಿನಾಥವು ಸಹ ಒಂದು. ಸಮುದ್ರ ಮಟ್ಟದಿಂದ ಸರಾಸರಿ ೩೧೨೪ ಮೀ. ಎತ್ತರವಿರುವ ಬದರಿನಾಥವು ಗಡ್ವಾಲ್ ಹಿಮಾಲಯದಲ್ಲಿ ಅಲಕನಂದಾ ನದಿಯ ದಂಡೆಯ ಮೇಲೆ ನರ ಮತ್ತು ನಾರಾಯಣ ಪರ್ವತಗಳ ನಡುವೆ ಸ್ಥಾಪಿತವಾಗಿದೆ.
ಅಲಕನಂದಾ ನದಿಯಲ್ಲಿ ಮುಳುಗಿದ್ದ ಮೂರ್ತಿಯನ್ನು ಆದಿ ಶಂಕರರು ತಪ್ತ ಕುಂಡದ ಬಳಿಯ ಗುಹೆಯಲ್ಲಿ ಪ್ರತಿಷ್ಠಾಪಿಸಿ ಮೂರ್ತಿಗೆ ನಿಯಮಿತ ಪೂಜಾವ್ಯವಸ್ಥೆಗಳನ್ನು ಮಾಡಿದರು. ಮುಂದೆ ೧೬ನೆಯ ಶತಮಾನದಲ್ಲಿ ಗಡ್ವಾಲ್‌ನ ಅರಸನು ಈಗ ನಾವು ಕಾಣುವ ದೇವಾಲಯವನ್ನು ನಿರ್ಮಿಸಿ ಬದರಿನಾರಾಯಣ ಮೂರ್ತಿಯನ್ನು ಅಲ್ಲಿ ಪುನಃ ಪ್ರತಿಷ್ಠಾಪಿಸಿದನು. ಈ ಮಂದಿರವು ಹಲವು ಸಲ ಪುನರುಜ್ಜೀವಗೊಳಿಸಲ್ಪಟ್ಟಿದೆ. ತೀವ್ರಹಿಮಪಾತ ಮತ್ತು ಭೂಕಂಪಗಳಂಥ ನೈಸರ್ಗಿಕ ಪ್ರಕೋಪಗಳಿಂದ ದೇವಾಲಯದ ಕಟ್ಟಡ ಸಾಕಷ್ಟು ಬಾರಿ ಹಾನಿಯುಂಟಾಗಿದೆ. ಮಂದಿರದ ಮುಖ್ಯ ಆರಾಧ್ಯ ಮೂರ್ತಿಯು ಶ್ರೀಮನ್ನಾರಾಯಣನದಾಗಿದ್ದು ಈ ಮೂರ್ತಿಯು ಕಪ್ಪು ಸಾಲಿಗ್ರಾಮ ಶಿಲೆಯಿಂದ ಮಾಡಲ್ಪಟ್ಟಿದ್ದು ಸುಮಾರು ಒಂದು ಮೀ. ಎತ್ತರವಾಗಿದೆ. ಇಲ್ಲಿಯ ನಾರಾಯಣ ಮೂರ್ತಿಯು ಧ್ಯಾನನಿರತ ಭಂಗಿಯಲ್ಲಿದೆ. ಸುಮಾರು ೫೦ ಅಡಿ ಎತ್ತರವಾಗಿರುವ ದೇವಾಲಯವು ಚಿನ್ನದ ವಿಮಾನ ಮತ್ತು ಚಾವಣಿಗಳನ್ನು ಹೊಂದಿದೆ. ದೇವಾಲಯದಲ್ಲಿ ಬದರಿನಾರಾಯಣನ ಮೂರ್ತಿಯ ಜೊತೆಗೆ ನರ ಮತ್ತು ನಾರಾಯಣ, ನರಸಿಂಹ, ಲಕ್ಷ್ಮಿ, ಉದ್ಧವ, ಗರುಡ, ಕುಬೇರ, ನಾರದ ಮತ್ತು ನವದುರ್ಗೆಯರ ಮೂರ್ತಿಗಳು ಸಹ ಸ್ಥಾಪಿಸಲ್ಪಟ್ಟಿದ್ದು ಪೂಜಿಸಲ್ಪಡುತ್ತಿವೆ.
ಸಂಸ್ಕೃತದಲ್ಲಿ ಬದರಿ ಅಥವಾ ಬದ್ರಿ ಎಂದರೆ ಎಲಚಿ ಕಾಯಿ (ಬೋರೆ ಕಾಯಿ) ಎಂದರ್ಥವಿದೆ. ಕೆಲವು ಪೌರಾಣಿಕ ಉಲ್ಲೇಖಗಳಲ್ಲಿ ಹೇಳಿರುವಂತೆ ಒಂದು ಕಾಲದಲ್ಲಿ ಇಲ್ಲಿ ಬೋರೆಕಾಯಿಗಳು ಅತ್ಯಂತ ಹೆಚ್ಚಾಗಿ ಬೆಳೆಯುತ್ತಿತ್ತಂತೆ. ಹಾಗಾಗಿ ಇಲ್ಲಿಗೆ ಬದರಿ ಅಥವಾ ಬದ್ರಿ ಎಂಬ ಹೆಸರು ಬಂದಿತೆನ್ನಲಾಗಿದೆ.
ಬದರಿನಾಥ ಕ್ಷೇತ್ರವು ವರ್ಷದಲ್ಲಿ ಆರು ತಿಂಗಳ ಕಾಲ ಮಾತ್ರವೇ ತೆರೆದಿರುತ್ತದೆ. ಉಳಿದ ಸಮಯ ಇದು ಪೂರ್ಣವಾಗಿ ಹಿಮದಲ್ಲಿ ಮುಚ್ಚಿಹೋಗಿರುತ್ತದೆ. ಸಾಮಾನ್ಯವಾಗಿ ಜೂನ್‌ನಿಂದ ಸೆಪ್ಟೆಂಬರ್ ವರೆಗೆ ಬದರಿನಾಥ ಕ್ಷೇತ್ರವನ್ನು ದರ್ಶಿಸಲು ಉತ್ತಮ ಕಾಲ. ಬದರಿನಾಥ ಕ್ಷೇತ್ರವು ಮುಚ್ಚಿರುವ ಕಾಲದಲ್ಲಿ ಬದರಿನಾಥನ ಉತ್ಸವ ಮೂರ್ತಿಯನ್ನು ಜ್ಯೋತಿರ್ಮಠ(ಜೋಷಿಮಠ)ಕ್ಕೆ ಕರೆತಂದು ಪೂಜಿಸಲಾಗುತ್ತದೆ. ಬದರಿನಾಥ ದೇವಾಲಯವು ಮುಚ್ಚಿರುವ ಸಮಯದಲ್ಲಿ ನಾರದ ಮಹರ್ಷಿಯು ಪ್ರತಿದಿನ ಬದರಿನಾರಾಯಣನಿಗೆ ಪೂಜೆ ಸಲ್ಲಿಸುವನೆಂದು ನಂಬಿಕೆ. ಕೃಪೆ: ವೀಕಿಪೀಡಿಯಾ
ಉತ್ತರಾಖಂಡದಲ್ಲಿ ಎಲ್ಲಿ ನೋಡಿದರೂ ಶಿವ ದೇವಾಲಯವನ್ನೇ ಕಾಣುತ್ತೇವೆ. ಆದರೆ ಬದರಿಯಲ್ಲಿ ಮಾತ್ರ ನಾರಾಯಣ ಹೇಗೆ ಬಂದ ಎಂಬುದಕ್ಕೆ ಒಂದು ಕಥೆ ಇದೆ. ಬದರಿಯನ್ನು ನೋಡಿದ ನಾರಾಯಣನಿಗೆ ಅಲ್ಲೇ ವಾಸ್ತವ್ಯ ಹೂಡಬೇಕೆಂಬ ಅಪೇಕ್ಷೆ ಆಗುತ್ತದೆ. ಆದರೆ ಅಲ್ಲಿ ಶಿವಪಾರ್ವತಿಯರು ಅದಾಗಲೇ ನೆಲೆನಿಂತಿದ್ದರು. ಅದಕ್ಕೆ ನಾರಾಯಣ ಒಂದು ಉಪಾಯ ಮಾಡಿದ. ವೇಷ ಮರೆಸಿ ಸಣ್ಣ ಬಾಲಕನಂತೆ ಮಾರ್ಪಾಡಾಗಿ ಶಿವ ಪಾರ್ವತಿಯರೆದುರು ಅಳುತ್ತ ನಿಂತ. ಅಳುತ್ತಲಿದ್ದ ಬಾಲಕನನ್ನು ನೋಡಿ ಪಾರ್ವತಿ ಕನಿಕರಗೊಂಡು ಎತ್ತಿಕೊಳ್ಳಲು ಹೋದಾಗ ಶಿವ ತಡೆದ. ಎತ್ತಿಕೊಳ್ಳಬೇಡ ಅವನು ಸಾಮಾನ್ಯ ಬಾಲಕನಲ್ಲ. ಆದರೂ ಪಾರ್ವತಿ ಅವನನ್ನು ಎತ್ತಿಕೊಂಡೇಬಿಟ್ಟಳು. ಆ ಬಾಲಕನಾಗಿದ್ದ ನಾರಾಯಣ ವಿಶಾಲವಾಗಿ ಎತ್ತರೆತ್ತರ ಬೆಳೆದು ಅಲ್ಲೇ ನೆಲೆನಿಂತನಂತೆ. ಅದಕ್ಕೆ ಅಲ್ಲಿಗೆ ವಿಶಾಲಬದರಿ ಎಂಬ ಹೆಸರು ಬಂತಂತೆ.

ಬದರಿಯಿಂದ ನಿರ್ಗಮನ
ನಮ್ಮೆಲ್ಲರ ಒಂದು ದಿನದ ವಸತಿ ಶುಲ್ಕ ರೂ ೨೦೦೦ ಪಾವತಿಸಿದರು. ಕೋಣೆಗೆ ಬಂದು ಗಂಟುಮೂಟೆ ಕಟ್ಟಿ ೧೧ ಗಂಟೆಗೆ ಬಸ್ ಹತ್ತಿದೆವು. ಅಲ್ಲಿಗೆ ನಮ್ಮ ಚಾರ್ಧಾಮ ಯಾತ್ರೆಗೆ ತೆರೆಬಿತ್ತು. ಮೈಕೈ ಎಲ್ಲ ನೋವು. ಏನಾದರೂ ಮಾತ್ರೆ ಇದ್ದರೆ ಕೊಡಿ ಎಂದು ಮಂಗಾರಾಮ ನನ್ನಲ್ಲಿ ಕೇಳಿದರು. ಸಾಮಾನ್ಯ ಎಲ್ಲ ತರಹದ ರೋಗಕ್ಕೆ ತಕ್ಕ ಮಾತ್ರೆಗಳನ್ನು ಸವಿತಾ ತಂದಿದ್ದಳು. ಅವಳು ನೋವು ನಿವಾರಕ ಮಾತ್ರೆ ಕೊಟ್ಟಳು ಮಂಗಾರಾಮನಿಗೆ. ಪಾಪ ಹತ್ತು ದಿನಗಳಿಂದ ಒಂದೇ ಸಮ ಅಂಥ ದಾರಿಯಲ್ಲಿ ಬಸ್ ಚಾಲನೆ ಮಾಡಿ ಸಾಕಾಗಿರಬಹುದು ಎಂದು ನನಗನಿಸಿ, ಬೀಡಿ ಸೇದುತ್ತಾರೆಂದು ಅವರಮೇಲಿದ್ದ ಕೋಪವೂ ಕರಗಿತು!
ಬದರಿಯಿಂದ ಹರಿದ್ವಾರದೆಡೆಗೆ ಸಾಗುವ ರಸ್ತೆ ಕಿರಿದಾಗಿದ್ದು, ಅಲ್ಲಲ್ಲಿ ಬೆಟ್ಟ ಕುಸಿದು, ಬಂಡೆಗಳು ರಸ್ತೆಪಕ್ಕ ಬಿದ್ದದ್ದು ಕಾಣಿಸಿತು. ಅಲ್ಲಲ್ಲಿ ಲ್ಯಾಂಡ್ ಸ್ಲೈಡ್ ಅಂಡ್ ರಾಕ್ ಫಾಲ್ ಝೋನ್ ಎಂಬ ಫಲಕ ಹಾಕಿದ್ದು ನೋಡಿದೆವು. ವಾಟರ್ ಫಾಲ್ಸ್ ನೋಡಿದ್ದೆವು. ಆದರೆ ರಾಕ್ ಫಾಲ್ಸ್ ನಮಗೆ ಹೊಸದು! ಅದನ್ನು ನೋಡುವ ಸಂದರ್ಭ ಬರದೇ ಇದ್ದದ್ದು ನಮ್ಮ ಪುಣ್ಯವೇ ಸರಿ. ಬಸ್ ಚಲಿಸುವಾಗ ಕಿಟಕಿ ಹೊರಗೆ ನೋಡಲೇಬಾರದು. ಕೆಲವೆಡೆ ರಸ್ತೆ ಎಷ್ಟು ಕಿರಿದಾಗಿರುತ್ತದೆ ಅಂದರೆ ಬಸ್ ಕೂದಲೆಳೆಯ ಅಂತರದಲ್ಲಿ ರಸ್ತೆ ದಾಟುತ್ತದೋ ಅನಿಸುತ್ತದೆ. ಕೆಳಗೆ ನದಿ ಪ್ರಪಾತ. ರಸ್ತೆ ಜರಿದು ಅಷ್ಟು ಕಿರಿದಾಗಿರುತ್ತದೆ. ನೋಡಿದರೆ ಎದೆ ಝಲ್ಲೆನಿಸುತ್ತದೆ. ಒಂದೆಡೆ ರಸ್ತೆಬದಿಯಲ್ಲಿ ಒಂದು ಕಾರು ನಜ್ಜುಗುಜ್ಜಾಗಿ ನಿಂತಿರುವುದು ಕಾಣಿಸಿತು. ಕಾರು ಚಲಿಸುತ್ತಿರುವಾಗ ರಾಕ್ ಫಾಲ್ಸ್ ಆಗಿ ಕಾರಿನಮೇಲೆ ಬಿದ್ದು ಕಾರು ಹುಡಿ ಆದದ್ದಂತೆ. ಗಂಡಹೆಂಡತಿ ಎರಡು ಮಕ್ಕಳು ಇದ್ದರಂತೆ ಕಾರಿನಲ್ಲಿ. ನಾಲ್ಕು ಮಂದಿಯ ಜೀವವೂ ಅಲ್ಲೆ ಹೋಗಿತ್ತಂತೆ. ಈ ಸುದ್ದಿ ಮಂಗಾರಾಮ ಹೇಳಿದ್ದು. ಆ ಕಾರು ನೋಡಿದಾಗ ಅಬ್ಬ, ಒಮ್ಮೆ ಇಂಥ ರಸ್ತೆಯಿಂದ ಪಾರಾಗಿ ಹೋಗಿ ಸರಿಯಾಗಿರುವ ರಸ್ತೆ, ಊರು ತಲಪಿದರೆ ಸಾಕಪ್ಪ ಎಂದು ಮನಸ್ಸು ಭಯಗೊಂಡು ಜಪಗೈಯಲು ತೊಡಗುತ್ತದೆ.
ಸೇನಾ ವಾಹನ ಸಿಕ್ಕಿದಾಗಲೆಲ್ಲ ನಾವು ಜೈ ಜವಾನ್ ಎಂದು ದೊಡ್ಡದಾಗಿ ನುಡಿದು ಸೆಲ್ಯೂಟ್ ಹೊಡೆಯುತ್ತಿದ್ದೆವು. ಅವರೂ ನಮಗೆ ಕೈ ಮಾಡಿ ಆ ಗೌರವವನ್ನು ಸ್ವೀಕರಿಸುತ್ತಿದ್ದರು. ಇಂಥ ಸ್ಥಳದಲ್ಲಿ ಅವರ ಸೇವೆ ಅನುಪಮವಾದುದೇ ಸರಿ.

  ರಸ್ತೆ ಕೆಲಸ ಮಾಡುವ ಕೂಲಿ ಕಾರ್ಮಿಕರು ತಮ್ಮ ಮಕ್ಕಳನ್ನು ಜೊತೆಯಲ್ಲೆ ಕರೆದುಕೊಂಡು ಅಲ್ಲೇ ಕೂರಿಸಿಕೊಂಡು, ಬೆನ್ನಮೇಲೆ ಹೊತ್ತು ಕೆಲಸ ಮಾಡುವ ದೃಶ್ಯ ನೋಡಿದೆವು.

OLYMPUS DIGITAL CAMERA

OLYMPUS DIGITAL CAMERA

OLYMPUS DIGITAL CAMERA

ವಿಷ್ಣುಪ್ರಯಾಗ
ದಾರಿಯಲ್ಲಿ ಮಧ್ಯಾಹ್ನ ಒಂದು ಗಂಟೆಗೆ ವಿಷ್ಣುಪ್ರಯಾಗಕ್ಕೆ ಹೋದೆವು. ಅಲಕನಂದಾ ನದಿಯೊಂದಿಗೆ ಧವಳಗಂಗಾನದಿ ಸೇರುವ ಸ್ಥಳವದು. ನದಿ ಸಂಗಮವಾಗುವ ಸ್ಥಳ ನೋಡುವುದೇ ಸೊಗಸು. ಒಂದು ನದಿಯ ನೀರಿಗಿಂತ ಇನ್ನೊಂದು ನದಿಯ ನೀರಿನ ಬಣ್ಣದಲ್ಲಿ ವ್ಯತ್ಯಾಸ ಸ್ಪಷ್ಟವಾಗಿ ಕಾಣುತ್ತದೆ. ಎಲ್ಲರೂ ನದಿಯಲ್ಲಿ ಇಳಿದು ತಲೆಗೆ ನೀರು ಚಿಮುಕಿಸಿಕೊಂಡು ಪಾವನರಾದರು. ನಾನು ನದಿಗಿಳಿಯದೆ ತೂಗುಸೇತುವೆಯಲ್ಲಿ ಅಡ್ಡಾಡಿದೆ.

OLYMPUS DIGITAL CAMERA

OLYMPUS DIGITAL CAMERA

ವೃದ್ಧಬದರಿ
ವಿಷ್ಣುಪ್ರಯಾಗದಿಂದ ಮುಂದೆ ಸಾಗಿ ದಾರಿಯಲ್ಲಿ ವೃದ್ಧಬದರಿ ನೋಡಿದೆವು. ಇದು ಪಂಚಬದರಿಯಲ್ಲಿ ಎರಡನೆಯದು. (ಮಹಾವಿಷ್ಣುವನ್ನು ಕುರಿತಾದ ಹಿಮಾಲಯದ ಐದು ಕ್ಷೇತ್ರಗಳು ಪಂಚ ಬದರಿ ಎನಿಸಿಕೊಳ್ಳುತ್ತವೆ. ಇವುಗಳಲ್ಲಿ ಬದರಿನಾಥ ಕ್ಷೇತ್ರವು ಸಹ ಸೇರಿದೆ. ವಿಶಾಲ ಬದರಿ : ಬದರಿನಾಥ ಕ್ಷೇತ್ರ, ಯೋಗ ಬದರಿ : ಪಾಂಡುಕೇಶ್ವರದಲ್ಲಿರುವ ಈ ದೇವಾಲಯದಲ್ಲಿ ಸಹ ಬದರಿನಾಥನು ಧ್ಯಾನಮುದ್ರೆಯಲ್ಲಿರುವನು. ಐತಿಹ್ಯಗಳ ಪ್ರಕಾರ ಪಾಂಡು ಮಹಾರಾಜನು ಈ ಮೂರ್ತಿಯನ್ನು ಪ್ರತಿಷ್ಠಾಪಿಸಿದನು. ಭವಿಷ್ಯ ಬದರಿ : ಜ್ಯೋತಿರ್ಮಠ ( ಜೋಷಿಮಠ)ದಿಂದ ೧೭ ಕಿ.ಮೀ. ದೂರದಲ್ಲಿದೆ. ಪುರಾಣ ಕಥೆಗಳ ಪ್ರಕಾರ ಮುಂದೊಂದು ದಿನ ಬದರಿನಾಥ ಕ್ಷೇತ್ರವು ಭೂಮಿಯಿಂದ ಮರೆಯಾದಾಗ ಬದರಿನಾಥನು ಇಲ್ಲಿ ನೆಲೆನಿಂತು ದರ್ಶನ ಕೊಡುವನು ಎಂಬುದು ಪ್ರತೀತಿ. ಆದ್ದರಿಂದಲೇ ಇದಕ್ಕೆ ಭವಿಷ್ಯ ಬದರಿ ಎಂಬ ಹೆಸರು. ವೃದ್ಧ ಬದರಿ : ಜ್ಯೋತಿರ್ಮಠದಿಂದ ೭ ಕಿ.ಮೀ. ದೂರದಲ್ಲಿ ಆನಿಮಠದಲ್ಲಿದೆ. ಕಥನಗಳ ಪ್ರಕಾರ ಬದರಿನಾಥನ ಮೂಲ ಪೂಜಾಸ್ಥಾನವು ಇದೇ ಆಗಿದ್ದಿತು. ಆದಿ ಬದರಿ : ಕರ್ಣಪ್ರಯಾಗದಿಂದ ೧೭ ಕಿ.ಮೀ. ದೂರದಲ್ಲಿದೆ. ೧೬ ಸಣ್ಣ ಮಂದಿರಗಳುಳ್ಳ ಇಲ್ಲಿನ ದೇವಾಲಯ ಸಂಕೀರ್ಣದಲ್ಲಿ ಮಹಾವಿಷ್ಣುವಿನ ೩ ಅಡಿ ಎತ್ತರದ ಕಪ್ಪು ಶಿಲೆಯ ಮೂರ್ತಿ ಪೂಜೆಗೊಳ್ಳುತ್ತಿದೆ.) ಪಂಚಬದರಿಗಳಲ್ಲಿ ನಾವು ಎರರು ಸ್ಥಳಕ್ಕೆ ಮಾತ್ರ ಭೇಟಿ ಇತ್ತುದು.
ಕೆಳಗೆ ಮೆಟ್ಟಲಿಳಿದು ಹೋಗಬೇಕು. ಊರೊಳಗೆ ಈ ದೇವಾಲಯವಿದೆ. ಪುಟ್ಟದಾದ ಮಂದಿರ. ಹಳ್ಳಿಯೊಳಗೆ ಕೆಲವಾರು ಮನೆಗಳಿವೆ. ಮನೆಯ ಸುತ್ತ ಸಾಕಷ್ಟು ತರಕಾರಿ ಕೃಷಿ ನಡೆಸಿದ್ದನ್ನು ನೋಡಿದೆವು. ನಮ್ಮಲ್ಲಿರುವಂತದ್ದೇ ಕೆಸುವಿನ ಗಿಡ ನೋಡಿ ಚಕಿತಳಾದೆ. ಕೆಸುವಿನೆಲೆಯಿಂದ ಏನು ಮಾಡುತ್ತಾರೆ ಎಂದು ಕೇಳಲು ಮರೆಯಿತು ಆ ಸಂದರ್ಭದಲ್ಲಿ. ಮುಂದೆ ಪುನಃ ಮೇಲೆ ಮೆಟ್ಟಲು ಹತ್ತುವ ಬದಲು ಕೆಳಗೇ ಇಳಿದೆವು. ಅಲ್ಲಿಗೆ ಬಸ್ ಬಂತು. ನಾವು ಇಳಿದು ಸ್ವಲ್ಪ ಹೊತ್ತಾದಮೇಲೆ ಬಸ್ ಬಂದದ್ದು. ಪೋನ್ ಹೋಗುತ್ತಿರಲಿಲ್ಲ. ಏನು ಮಾಡುವುದಪ್ಪ, ಕೆಳಗೆ ಬರಲು ಹೇಳಿದ್ದೆ ಎಂದು ವಿಠಲರಾಜು ಹೇಳಿಕೊಂಡಾಗ ಬಸ್ ಬರುವುದು ಕಾಣಿಸಿತು. ಬಸ್ಸಿನ ಒಂದು ಚಕ್ರ ಪಂಕ್ಚರ್ ಆಗಿತ್ತಂತೆ. ಇಷ್ಟು ದಿನದಲ್ಲಿ ಇದು ಮೂರನೇ ಸಲ ಚಕ್ರ ಪಂಕ್ಚರ್ ಆದದ್ದು. ಎರಡು ಸಲವೂ ನಾವು ಹೀಗೆ ಯಾವುದಾದರೊಂದು ಸ್ಥಳ ನೋಡಲು ಇಳಿದಾಗಲೇ ಆಗಿದ್ದು. ಹಾಗಾಗಿ ಕಾಯಬೇಕಾದ ಪ್ರಸಂಗ ಬಂದಿರಲಿಲ್ಲ.

OLYMPUS DIGITAL CAMERA

OLYMPUS DIGITAL CAMERA

ಇಂದ್ರಲೋಕ
ವೃದ್ಧಬದರಿ ನೋಡಿ ಮುಂದೆ ಹೋದಾಗ ಪೀಪಲ್ ಕೋಟಿಯಲ್ಲಿ ಇಂದ್ರಲೋಕ ಹೊಟೇಲಿಗೆ ಊಟಕ್ಕೆ ಹೋದೆವು. ಒಂದು ಊಟಕ್ಕೆ ರೂ.೯೦. ಸೊಗಸಾದ ಊಟ. ಹೆಸರೇನೋ ಇಂದ್ರಲೋಕ. ಆದರೆ ಹೆಸರಿಗೆ ತಕ್ಕಂತೆ ಪಾಯಿಖಾನೆ ಇರಲಿಲ್ಲ. ಒಳಗೆ ಹೋಗಲು ಸಾಧ್ಯವಿಲ್ಲ ಹಾಗಿತ್ತು ಎಂದು ಶೋಭಾ ಹೇಳಿದರು. ನಾವು ಊಟ ಮಾಡಿ ಬಸ್ಸಿನ ಬಳಿ ಬಂದಾಗ ಗಾಳಿ ಹೋದ ಚಕ್ರವನ್ನು ರಿಪೇರಿ ಮಾಡಿಸಿ ತಯಾರಾಗಿದ್ದರು ಸೋನು ಹಾಗೂ ಮಂಗಾರಾಮ.
ನಂದಪ್ರಯಾಗ
ಊಟವಾಗಿ ಮುಂದುವರಿದು ನಂದಪ್ರಯಾಗಕ್ಕೆ ಹೋದೆವು. ಅಲಕನಂದಾ ನದಿಯೊಂದಿಗೆ ನಂದಾಕಿನಿ ನದಿ ಸಂಗಮವಾಗುವ ಸ್ಥಳವದು.
ಕರ್ಣಪ್ರಯಾಗ
ಕರ್ಣಪ್ರಯಾಗ ದೂರದಿಂದಲೇ ನೋಡಿ ಮುಂದುವರಿದೆವು. ಸಣ್ಣಗೆ ಮಳೆ ಬರುತ್ತಲಿದ್ದದ್ದರಿಂದ ಕೆಳಗೆ ಇಳಿಯಲಿಲ್ಲ. ಕರ್ಣನ ದೇವಾಲಯವಿದೆಯಂತೆ ಅಲ್ಲಿ. ಅಲಕನಂದಾ ನದಿಯೊಂದಿಗೆ ಕರ್ಣಪಿಂದಾರ ನದಿ ಸಂಗಮವಾಗುತ್ತದೆ.
ಮುಸ್ಸಂಜೆವೇಳೆಯಲಿ ನಗರಾಸು ಸೇರಿದಾಗ
ಸಂಜೆ ಆರೂವರೆ ಗಂಟೆ ಆದಾಗ ಮಂಗಾರಾಮ ಬಸ್ ಚಾಲನೆ ನಿಲ್ಲಿಸಿಬಿಟ್ಟರು. ನಗರಾಸು ಎಂಬ ಊರಿನಲ್ಲಿ ನಾಗಸಾನಿ ವಸತಿಗೃಹದ ಎದುರು ಬಸ್‌ನಿಂದ ಇಳಿದೆವು. ಅಲ್ಲಿಯ ಕೋಣೆಯಲ್ಲಿ ನಮ್ಮ ಲಗೇಜು ಇಳಿಸಿ ಕಾಲು ಚಾಚಿದೆವು. ಒಂದು ಕೋಣೆಯಲ್ಲಿ ನಾವು ನಾಲ್ಕು ಮಂದಿ. ಸರೋಜ, ಪೂರ್ಣಿಮಾ, ಸವಿತಾ, ನಾನು. ತಣ್ಣಗೆ ನೀರಿನಲ್ಲಿ ಸ್ನಾನ ಮಾಡಿ ಸುಧಾರಿಸಿಕೊಂಡೆವು. ಮಧ್ಯಾಹ್ನದ ಊಟ ತಡವಾಗಿ ಮಾಡಿದ್ದರಿಂದ ರಾತ್ರಿಯ ಊಟ ಸ್ವಲ್ಪವೇ ಸಾಕು ಎಂದು ನಾವು ಕೆಲವು ಮಂದಿ ತೀರ್ಮಾನಿಸಿ ಕೆಳಗೆ ಯಾವ ಹೊಟೇಲು ಇವೆ ಎಂದು ನೋಡಲು ಹೊರಟೆವು. ಮುಂದೆ ಗುರುದ್ವಾರ ಇದೆ. ಅಲ್ಲಿ ಊಟ ಇದೆ ಎಂಬ ಮಾಹಿತಿ ನಮ್ಮ ಹೊಟೇಲಿನವರು ಕೊಟ್ಟರು. ನಮ್ಮ ವಸತಿಗೃಹದ ಎದುರು ಭಾಗದಲ್ಲೇ ಇರುವ ಗುರುದ್ವಾರಕ್ಕೆ ಹೋದೆವು.

OLYMPUS DIGITAL CAMERA

ಗುರುದ್ವಾರದಲ್ಲಿ ನಮಗೆ ಬರೆ ಕಾಸಿದರು!
ನಾವು ಕುತೂಹಲದಿಂದ ಗುರುದ್ವಾರದೊಳಗೆ ಕಾಲಿಟ್ಟೆವು. ಅಲ್ಲಿ ಸುಮಾರು ಮಂದಿ ಸಾಲಾಗಿ ಕೂತು ಊಟ ಮಾಡುತ್ತಿರುವುದು ಕಂಡಿತು. ಮುಂದೆ ಜಗಲಿಯಲ್ಲಿ ಒಬ್ಬರು ಸಿಖ್‌ಗುರು ಕೂತದ್ದು ಕಂಡು ಅವರನ್ನು ಮಾತಾಡಿಸಿ ಮತ್ತೆ ಊಟಕ್ಕೆ ಹೋಗುವ ಎಂದು ತೀರ್ಮಾನಿಸಿದೆವು. ಅಲ್ಲಿ‌ಒಳಗೆ ಹೋಗಬೇಕೆಂದರೆ ಗಂಡಸು ಹೆಂಗಸು ಎಂಬ ಭೇದವಿಲ್ಲದೆ ಎಲ್ಲರೂ ತಲೆಮೇಲೆ ಬಟ್ಟೆ ಹಾಕಿಕೊಳ್ಳಲೇಬೇಕು. ಚೂಡಿದಾರದ ಶಾಲಿದ್ದವರು ತಲೆಗೆ ಸುತ್ತಿಕೊಂಡರು. ಇಲ್ಲದವರು ಅಲ್ಲಿಟ್ಟಿದ್ದ ಮಕಮಲ್ ಬಟ್ಟೆ ತೆಗೆದುಕೊಂಡು ತಲೆಗೆ ಸುತ್ತಿದೆವು. ಸಿಖ್‌ಗುರು ಬಳಿ ಬಂದು ತಲೆಬಾಗಿ ಕೂತೆವು. ನಮ್ಮನ್ನು ನೋಡಿದ್ದೇ, ‘ಮೊದಲಿಗೆ ಒಬ್ಬರನ್ನು ಕಂಡಾಗುವಾಗ ನಮಸ್ಕಾರ ಎಂದು ಹೇಳುವ ಅಭ್ಯಾಸ ನಿಮಗಿಲ್ಲವೇ? ನಿಮ್ಮ ಊರಿನಲ್ಲಿ ಇಂಥ ಪದ್ಧತಿ ಇಲ್ಲವೆ? ಎಂದು ಬರೆ ಕಾಸಿದರು. ಮೊದಲಿಗೆ ನಮಗೆ ಅವರು ಏನು ಹೇಳುತ್ತಿದ್ದಾರೆಂದೇ ಅರ್ಥವಾಗಿರಲಿಲ್ಲ. ಅರ್ಥವಾದಾಗ ನಮ್ಮ ಮಾವನ (ಜಿ.ಟಿ. ನಾರಾಯಣ ರಾವ್) ನೆನಪು ಬಂತು. ಮೊದಲು ಯಾರನ್ನು ನೋಡಿದರೂ ನಮಸ್ಕಾರ ಎಂದು ಹೇಳಿ ಮಾತಾಡಿಸಬೇಕು ಅಂಥ ಅಭ್ಯಾಸ ಬೆಳೆಸಿಕೊಳ್ಳಲೇಬೇಕು ಎಂದು ನಮ್ಮ ಮಾವ ಪಾಟ ಮಾಡುತ್ತಿದ್ದದ್ದು ಆ ಸಂದರ್ಭದಲ್ಲಿ ಕಣ್ಣಿಗೆ ಕಟ್ಟಿತು! ಆದರೆ ನಾವು ನಮಸ್ಕಾರ ಎಂದು ಬಾಯಿಯಲ್ಲಿ ಹೇಳದೆಯೇ ಇದ್ದರೂ ತಲೆಬಾಗಿ ಅವರೆದುರು ಕೂತಿದ್ದೆವು. ಮತ್ತೆ ನಮ್ಮನ್ನು ಎಲ್ಲಿಂದ ಬಂದದ್ದು ಎಂದೆಲ್ಲ ಕೇಳುತ್ತ ಚೆನ್ನಾಗಿ ಮಾತಾಡಿಸಿದರು.
ಪ್ರಸಾದ ಭೋಜನ
ಅವರೊಡನೆ ಮಾತಾಡಿ ಊಟಕ್ಕೆ ಕೂತೆವು. ಅನ್ನ ಸಾರು, ಚಪಾತಿ, ಗಸಿ. ಚಪಾತಿ ತಟ್ಟೆಗೆ ಬಡಿಸುವುದಿಲ್ಲ. ಚಪಾತಿ ಬಡಿಸುವಾಗ ಎರಡು ಕೈ ಹಿಡಿಯಬೇಕು. ಆಗ ನಮ್ಮ ಕೈಗೆ ಹಾಕುತ್ತಾರೆ. ಅದು ಪ್ರಸಾದವಂತೆ. ಎಲ್ಲವನ್ನೂ ಪದೇಪದೇ ಕೇಳುತ್ತ ಹೊಟ್ಟೆತುಂಬ ಬಡಿಸುತ್ತಾರೆ.
ತಟ್ಟೆ ಲೋಟಗಳನ್ನು ಸಾಬೂನು ನೀರಿನಲ್ಲಿ ತೊಳೆದು ಇಡುತ್ತಿದ್ದುದನ್ನು ಕಂಡೆವು. ವಿಶಾಲವಾದ ಸ್ಥಳದಲ್ಲಿ ದೊಡ್ಡ ದೊಡ್ಡ ಡಬರಿಯಲ್ಲಿ ಅಡುಗೆ ಮಾಡಿಟ್ಟಿರುವುದು ಕಂಡಿತು. ಚಹಾ ಕೂಡ ಇತ್ತು. ಎಲ್ಲವನ್ನೂ ಅವಗಾಹನೆ ಮಾಡಿ ನೋಡಿ ನಮ್ಮ ಕಾಣಿಕೆಯನ್ನು ಹುಂಡಿಗೆ ಹಾಕಿ ಕೋಣೆಗೆ ಬಂದೆವು. ಗುರುದ್ವಾರದಲ್ಲಿ ಕೂಡ ವಸತಿಗೆ ಕೋಣೆಗಳು ಸಿಗುತ್ತವೆ.
ನಗರಾಸು ನಿರ್ಗಮಿಸು
ಬೆಳಗ್ಗೆ (೨೨-೯-೨೦೧೬) ೫.೧೫ಕ್ಕೆ ಎದ್ದು ತಯಾರಾದೆವು. ೬ ಗಂಟೆಯೊಳಗೆ ಹೊರಡಬೇಕೆಂದು ಹೇಳಿದ್ದರು. ಆದರೆ ಹೊರಡುವಾಗ ೬.೫೦ ಆಗಿತ್ತು. ರಾತ್ರಿ ಬಸ್ಸಿನೊಳಗೆ ಲೈಟ್ ಉರಿದು ಬಸ್ ಬ್ಯಾಟರಿ ಚಾರ್ಜು ಕಡಿಮೆಯಾಗಿತ್ತು. ಅದನ್ನು ಮಂಗಾರಾಮ ಮತ್ತು ಸೋನು ಏನೋ ರಿಪೇರಿ ಮಾಡುತ್ತಿದ್ದರು. ಸೋನು ಬಸ್ಸಿನಡಿ ತೂರಿ ರಿಪೇರಿಯಲ್ಲಿ ಮಗ್ನನಾಗಿದ್ದ. ಬಸ್ಸಡಿಯಿಂದ ಹೊರಬಂದಾಗ ಮೈಪೂರ್ತಿ ಮಣ್ಣುಮೆತ್ತಿಕೊಂಡಿದ್ದ. ಕ್ಷಣದಲ್ಲಿ ಸ್ನಾನ ಮಾಡಿ ತಯಾರಾಗಿ ಬಸ್ಸೇರಿದ. ಈ ಮಧ್ಯೆ ನಾವು ಅಲ್ಲಿರುವ ಹೊಟೇಲಿನಲ್ಲಿ ಕಾಫಿ, ಚಹಾ ಕುಡಿದೆವು. ಮಂಗಾರಾಮ ಬೀಡಿ ಪ್ಯಾಕೆಟ್ ಕೊಂಡು ಜೇಬಿಗೆ ಹಾಕಿಕೊಳ್ಳುವುದನ್ನು ಮರೆಯಲಿಲ್ಲ! ಬೀಡಿ ಕಥಮ್ ಹೋಗಯಾ ಎಂದು ನಾನು ತಮಾಷೆಗೆ ಹೇಳಿದೆ. ಆಗ ಜೇಬಿನಿಂದ ಇನ್ನೊಂದು ಕಟ್ಟು ತೆಗೆದು ತೋರಿಸಿದರು! ನಿನ್ನೆ ಗುರುದ್ವಾರ ನೋಡದವರು ಅಲ್ಲಿಗೆ ಹೋಗಿ ನೋಡಿ ಬಂದರು.

ರುದ್ರಪ್ರಯಾಗ
ಅಂತೂ ನಮ್ಮ ಬಸ್ ನಗರಾಸು ಬಿಟ್ಟು ಹೊರಟು ೮ ಗಂಟೆಗೆ ರುದ್ರಪ್ರಯಾಗ ತಲಪಿತು. ರುದ್ರಪ್ರಯಾಗದಲ್ಲಿ ಶಿವನ ದೇವಾಲಯವಿದೆ. ಇಲ್ಲಿ ಅಲಕನಂದಾ ಮತ್ತು ಮಂದಾಕಿನಿ ನದಿಗಳ ಸಂಗಮವಾಗುತ್ತದೆ. ಎರಡು ನದಿಗಳು ಕೂಡಿ ಮುಂದೆ ಹರಿಯುವುದನ್ನು ನೋಡುತ್ತ ನಿಂತರೆ ಸಮಯ ಸರಿಯುವುದು ಗೊತ್ತಾಗುವುದಿಲ್ಲ.
ಪುರಾಣದ ಪ್ರಕಾರ, ಶಿವ ರುದ್ರನ ಅವತಾರ ಹೊಂದಿ, ಸಂಗೀತದಲ್ಲಿ ಪರಿಣತಿ ಪಡೆಯಬೇಕೆನ್ನುವ ಅಭಿಲಾಷೆಯಿಂದ ಇಲ್ಲಿ ತಪಸ್ಸು ಮಾಡಿದ್ದನಂತೆ. ಇಲ್ಲಿ ನಾರದ ಮುನಿಗೆ ಆಶೀರ್ವಾದ ಮಾಡಿದ್ದನಂತೆ. ಅದರ ಕುರುಹಾಗಿ ನಾರದ ವಿಗ್ರಹ ಕೂಡ ಇದೆ. ಈ ಸ್ಥಳದ ಹತ್ತಿರದಲ್ಲಿ ಜಗದಂಬಾ ದೇವಾಲಯವನ್ನೂ ಕಾಣಬಹುದು.
ದೇವಾಲಯ ನೋಡಿ ಹೊರಟು ಹತ್ತಿರವಿರುವ ಹೊಟೇಲಿನಲ್ಲಿ ಪರೋಟ, ಚಪಾತಿ ತಿಂದು ೯.೧೫ಕ್ಕೆ ಮುಂದೆ ಹೊರಟೆವು.

devaprayaga-sangama

ದಾರಿಮಾತಾ ಮಂದಿರ

ಇದು ಬದ್ರಿನಾಥ- ಶ್ರೀನಗರ ಹೆದ್ದಾರಿಯಲ್ಲಿ ಸಾಗುವಾಗ ಅಲಕನಂದಾ ನದಿ ಮಧ್ಯೆ ಕಾಣುತ್ತದೆ. ನದಿ ಮಧ್ಯೆ ಬೃಹತ್ತಾಗಿ ಕಟ್ಟಿದ್ದಾರೆ.  ದೇವಾಲಯ ತಲಪಲು ಒಂದುಕೀಮೀ ಮೆಟ್ಟಲಿಳಿದು ಸೇತುವೆಯಲ್ಲಿ ದಾಟಿ ಹೋಗಬೇಕು. ನಾವು ಹತ್ತು ಗಂಟೆಗೆ ದೇವಾಲಯ ತಲಪಿದೆವು. ಸೇತುವೆಯುದ್ದಕ್ಕೂ ಗಂಟೆ ಕಟ್ಟಿದ್ದಾರೆ. ದೇವಾಲಯದ ಸಂದುಗೊಂದುಗಳಲ್ಲೂ ಗಂಟೆಗಳು ನೇತಾಡುತ್ತಿದ್ದುವು. ಬಹುಶಃ ಭಕ್ತರು ಹರಕೆ ಸಲ್ಲಿಸಲು ಗಂಟೆ ಕೊಟ್ಟದ್ದನ್ನೆಲ್ಲ ಕಟ್ಟಿದ್ದಾರೆ ಎನಿಸುತ್ತದೆ. ಇನ್ನು ಗಂಟೆ ಕೊಟ್ಟರೆ ಅಲ್ಲಿ ಕಟ್ಟಲೂ ಸ್ಥಳವಿಲ್ಲ. ಅದಕ್ಕಾಗಿಯೇ ಒಂದು ಕಟ್ಟಡ ನಿರ್ಮಾಣಗೊಂಡರೂ ಅಶ್ಚರ್ಯವಿಲ್ಲ! ನದಿ ಮಧ್ಯೆ ಕಾಳಿಯಮಂದಿರ. ನೋಡಲು ಚೆನ್ನಾಗಿದೆ. ತೂಗು ಸೇತುವೆ ಕೂಡ ಇದೆ. ಉತ್ತರಾಖಂಡದ ಚಾರ್ಧಾಮಗಳ ರಕ್ಷಕಿ ಈ ಕಾಳೀದೇವಿ ಎಂಬುದು ಅಲ್ಲಿಯ ಜನರ ನಂಬಿಕೆ.
ನಾವು ದೇವಾಲಯ ನೋಡಿ ಹತ್ತೂ ಮೂವತೈದಕ್ಕೆ ವಾಪಾಸು ಮೆಟ್ಟಲು ಹತ್ತಿ ಬಸ್ ಹತ್ತಿದೆವು. ಅಲ್ಲಿಂದ ಹೋಗುವ ರಸ್ತೆಯುದ್ದಕೂ ಮಾವು, ಬೇವು, ಕರಿಬೇವಿನ ಮರಗಳು ಕಂಗೊಳಿಸುತ್ತಿದ್ದುವು.

img_5046 img_5050

img_5058

ದೇವಪ್ರಯಾಗ
೧೨.೪೫ಕ್ಕೆ ದೇವಪ್ರಯಾಗ ತಲಪಿದೆವು. ಮಾರ್ಗದಿಂದ ದೇವಾಲಯಕ್ಕೆ ಹೋಗಲು ಸುಮಾರು ನಡೆಯಬೇಕು. ನದಿ ದಾಟಲು ತೂಗು ಸೇತುವೆ ಇದೆ. ಅಲ್ಲಿ ಪೂಜೆ ಮಾಡಿಸಲು, ಕರ್ಮ ಮಾಡಿಸಲು ಪಂಡಿತರು ನಮ್ಮನ್ನು ಮುತ್ತಿಗೆ ಹಾಕಿದರು. ನಾವ್ಯಾರೂ ಅವರ ಮಾತಿಗೆ ಮರುಳಾಗಲಿಲ್ಲ. ನಮ್ಮಲ್ಲಿ ಕೆಲವರು ನದಿಯಲ್ಲಿ ಸ್ನಾನ ಮಾಡಿದರು.
ಉತ್ತರಾಖಂಡದ ಟೆಹ್ರಿ ಗಡ್ವಾಲ್ ಜಿಲ್ಲೆಯಲ್ಲಿರುವ ದೇವಪ್ರಯಾಗ ಹಿಂದೂಗಳ ಪವಿತ್ರ ಕ್ಷೇತ್ರಗಳಲ್ಲೊಂದು. ಸಂಸ್ಕೃತದಲ್ಲಿ ದೇವಪ್ರಯಾಗ ಅಂದರೆ ಪವಿತ್ರ ಸಂಗಮ. ಇಲ್ಲಿ ಅಲಕನಂದಾ ಬದರಿಯಿಂದ ಹರಿದು ಬಂದು ಭಾಗೀರಥಿ ಗೋಮುಖದಿಂದ ಹರಿದು ಬಂದು ಇಲ್ಲಿ ಇವೆರಡೂ ನದಿಗಳು ಸಂಗಮವಾಗುತ್ತವೆ. ಏಳನೇ ಶತಮಾನದಿಂದೀಚೆಗೆ ಈ ಪ್ರದೇಶ ಹಲವು ಹೆಸರುಗಳಿಂದ ಕರೆಸಿಕೊಂಡಿದೆ. ಮುಖ್ಯವಾಗಿ ಬ್ರಹ್ಮಪುರಿ, ಬ್ರಹ್ಮ ತೀರ್ಥ, ಶ್ರೀಖಂಡ ನಗರ ಮತ್ತು ಉತ್ತರಾಖಂಡದ ಜೆಮ್ ಅಂತಲೂ ಕರೆಯಲ್ಪಡುತ್ತಿತ್ತು. ಹಿಂದೂ ಧರ್ಮದ ಋಷಿ ದೇವ ಶರ್ಮಾ ಇಲ್ಲಿ ವಾಸಿಸುತ್ತಿದ್ದುದರಿಂದ ದೇವಪ್ರಯಾಗವೆಂಬ ಹೊಸ ಹೆಸರು ಬಂದು, ಅದೇ ಶಾಶ್ವತವಾಯಿತು.

    ಇಲ್ಲಿ ನದಿಯ ದಡದ ಮೇಲೆ ಎತ್ತರದಲ್ಲಿ ರಾಮನ ದೇವಾಲಯವಿದೆ. ಹಿಂದೂಗಳಲ್ಲಿ ಚಾಲ್ತಿಯಲ್ಲಿರುವ ದಂತಕಥೆಗಳ ಪ್ರಕಾರ, ರಾಮ ಮತ್ತು ಆತನ ತಂದೆ ದಶರಥ ಮಹಾರಾಜ ಈ ಪ್ರದೇಶದಲ್ಲಿ ತಪಸ್ಸು ಕೈಗೊಂಡಿದ್ದರು. ಅದನ್ನು ಪುಷ್ಟೀಕರಿಸುವಂತೆ ಒಂದು ಕಟ್ಟೆ ಇದೆ ಅಲ್ಲಿ. ಅದೇ ಕಟ್ಟೆಯಲ್ಲಿ ಕೂತು ತಪಸ್ಸು ಮಾಡಿದ್ದು ಎಂದು ತೋರಿಸುತ್ತಾರೆ. ದೇವಾಲಯ ಬಾಗಿಲು ಹಾಕಿತ್ತು. ಅರ್ಚಕರು ಬಂದು ಬಾಗಿಲು ತೆರೆದರು. ನಾವು ತಟ್ಟೆಗೆ ದಕ್ಷಿಣೆ ದೊಡ್ಡ ನೋಟು ಹಾಕಲಿಲ್ಲವೆಂದು ಅರ್ಚಕರಿಗೆ ಸಿಟ್ಟುಬಂದು ಎಲ್ಲರೂ ಬರುವ ಮೊದಲೇ ಪುನಃ ದೇವಾಲಯದ ಬಾಗಿಲು ಹಾಕಿಬಿಟ್ಟರು.

20160922_125403

ರಾಮ ತಪಸ್ಸು ಮಾಡಿದ ಸ್ಥಳ

ರಾಮ ತಪಸ್ಸು ಮಾಡಿದ ಸ್ಥಳ

devaprayaga

ಹರಿದ್ವಾರದೆಡೆಗೆ ಗಮನ
ಅಲ್ಲಿಂದ ಬರುತ್ತ ದಾರಿಯಲ್ಲಿ ಸಮೋಸ ತಿಂದೆವು. ಮೇಲೆ ಹತ್ತಿ ರಸ್ತೆಗೆ ಬಂದು ನಿಂಬೆ ಪಾನಕ ಕುಡಿದು ಹತ್ತಿ ಬಂದ ಸುಸ್ತನ್ನು ಪರಿಹರಿಸಿಕೊಂಡೆವು. ೧.೪೫ಕ್ಕೆ ಅಲ್ಲಿಂದ ಹೊರಟೆವು. ದಾರಿಯುದ್ದಕ್ಕೂ ಅಲ್ಲಲ್ಲಿ ಆಕರ್ಷಕ ಸ್ಲೋಗನ್‌ಗಳ ಫಲಕ ಹಾಕಿದ್ದು ಕಂಡಿತು. ಉದಾಹರಣೆಗೆ:

This is highway not runway
Speed thrills but kills
Life is journey complete it
No race no rally enjoy the nature
Life is precious don‘t waste it
Land slide and rockfall zone

ದಾರಿಯಲ್ಲಿ ಒಂದು ಖಾನಾವಳಿಯಲ್ಲಿ ಊಟಕ್ಕೆ ನಿಲ್ಲಿಸಿದರು. ಅಲ್ಲಿ ಒಂದು ಥಾಲಿಗೆ ರೂ.೧೭೫. ನಾನು ತಂಗಿ ಸವಿತಳೂ ಒಂದು ಥಾಲಿ ತೆಗೆದುಕೊಂಡು ಹಂಚಿ ತಿಂದೆವು. ಅದೇ ಇಬ್ಬರಿಗೂ ಸಾಕಷ್ಟಾಗಿತ್ತು. ಮುಂದೆ ಋಷಿಕೇಶ ಮಾರ್ಗವಾಗಿ ಹರಿದ್ವಾರ ತಲಪುವಾಗ ಸಂಜೆ ಗಂಟೆ ಆರು ಆಗಿತ್ತು.
ರಾಮಭವನದಲ್ಲಿ ವಾಸ್ತವ್ಯ- ಸಾರಥಿ- ಸಹಾಯಕರಿಗೆ ವಿದಾಯ
ಬಸ್ಸಿಳಿದು ನಮ್ಮ ಬ್ಯಾಗ್ ಹೊತ್ತು ರಾಮಭವನಕ್ಕೆ ಬಂದೆವು. ಅಲ್ಲಿ ಮಂಗಾರಾಮ ಹಾಗೂ ಸೋನುಗೆ ಬೀಳ್ಕೊಡುಗೆ ಸಮಾರಂಭ. ಹತ್ತು ದಿನ ಬಹಳ ಚೆನ್ನಾಗಿ ಬಸ್ ಚಾಲನೆ ಮಾಡಿ ಸುರಕ್ಷತೆಯಿಂದ ನಮ್ಮನ್ನು ಇಲ್ಲಿಗೆ ತಲಪಿಸಿದ್ದಕ್ಕೆ ತುಂಬ ಧನ್ಯವಾದಗಳು ಎಂದು ನುಡಿದು ಮಂಗಾರಾಮನಿಗೆ ಉಡುಗೊರೆ ಕೊಟ್ಟರು. ನನ್ನಿಂದ ಏನಾದರೂ ತಪ್ಪಾಗಿದ್ದರೆ, ಬೀಡಿ ಸೇದಿ ತೊಂದರೆ ಕೊಟ್ಟದ್ದಕ್ಕೆ ಕ್ಷಮಿಸಿ ಎಂದು ಮಂಗಾರಾಮ ಪ್ರತಿಯಾಗಿ ನುಡಿದು ಕ್ಷಮೆ ಯಾಚಿಸಿದರು. ಸೋನುಗೆ ಉಡುಗೊರೆ ಕೊಟ್ಟು ಬೀಡಿ ಸೇದುವ ಚಟ ಕಲಿಯಬೇಡ. ಒಳ್ಳೆಯದಾಗಲಿ ಎಂದು ಶುಭಕೋರಿ ಅವರಿಬ್ಬರಿಗೆ ವಿದಾಯ ಹೇಳಿದೆವು. ಅವರೂ ನಮ್ಮನ್ನು ಆತ್ಮೀಯವಾಗಿ ಬೀಳ್ಕೊಂಡು ಹೊರಟರು.

20160922_181325

ಉತ್ತರಾಖಂಡ ರಾಜ್ಯವನ್ನು “ದೇವಭೂಮಿ’’ಎಂಬ ಹೆಸರಿನಿಂದ ಕರೆಯುತ್ತಾರೆ. ನಿಜಕ್ಕೂ ಇದರ ಅನುಭವ ಆಯಿತು ನಮಗೆ. ದಾರಿಯಲ್ಲಿ ಎಲ್ಲಿಯೂ ನಮಗೆ ಹೆಂಡದ ಅಂಗಡಿ ಕಾಣಲಿಲ್ಲ. ಮಾಂಸಾಹಾರದ ಹೊಟೇಲೂ ಕಾಣಸಿಗಲಿಲ್ಲ. ಮತ್ತು ಎಲ್ಲೂ ಹೆಂಡ ಕುಡಿದು ಅಸಭ್ಯವಾಗಿ ವರ್ತಿಸುವ, ತೂರಾಡಿಕೊಂಡು ರಸ್ತೆ ಬದಿ ಬಿದ್ದಿರುವವರಾರೂ ಕಾಣಲಿಲ್ಲ. ನಾವು ಹೋದೆಡೆಯಲ್ಲೆಲ್ಲ ನಮಗೆ ನಗುನಗುತ್ತಲೇ ಉಪಚಾರ ಸೇವೆ ಒದಗಿಸಿದ್ದರು. ಎಲ್ಲೂ ಯಾರಿಂದಲೂ ಏನೂ ಅಪಚಾರ ಅಸಮಾಧಾನ ಆಗಿರಲಿಲ್ಲ.
ನಮ್ಮ ನಮ್ಮ ಕೋಣೆ ಸೇರಿ ಸ್ನಾನಾದಿ ಮುಗಿಸಿದೆವು. ಬಟ್ಟೆ ತೊಳೆಯುವವರು ತೊಳೆದು ಹರಗಿದರು. ಸರಸ್ವತಿ ಹಾಗೂ ಶಶಿಕಲಾ ರಾತ್ರೆ ಊಟಕ್ಕೆ ಅನ್ನ ಸಾರು ಮಾಡಿ ಬಡಿಸಿದರು. ತಿಂದು ಹೊಟ್ಟೆದೇವರನ್ನು ತೃಪ್ತಿಪಡಿಸಿ ಮಲಗಿದೆವು.

 –ಮುಂದುವರಿಯುವುದು.